ಬೆಂಗಳೂರು: ‘ಗುತ್ತಿಗೆದಾರ ಸಂತೋಷ್ ಪಾಟೀಲ ಆತ್ಮಹತ್ಯೆ ಪ್ರಕರಣದಲ್ಲಿ ಕೆ.ಎಸ್. ಈಶ್ವರಪ್ಪ ಅವರಿಗೆ ರಾಜ್ಯ ಸರ್ಕಾರ ‘ಬಿ’ ರಿಪೋರ್ಟ್ ನೀಡಿರುವುದರ ವಿರುದ್ಧನಾವು ದೊಡ್ಡ ಹೋರಾಟ ಮಾಡುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಈಶ್ವರಪ್ಪ ಅವರನ್ನು ಪ್ರಕರಣದಿಂದ ಕೈ ಬಿಡಲು ಸರ್ಕಾರ ಮೊದಲೇ ಯೋಜನೆ ರೂಪಿಸಿತ್ತು. ‘ಬಿ’ ರಿಪೋರ್ಟ್, ಪೊಲೀಸರ ತನಿಖೆ ಬಗ್ಗೆ ಕಾನೂನು ತಜ್ಞರ ಜೊತೆ ಚರ್ಚಿಸಿದ್ದೇವೆ. ತನಿಖೆ ವೇಳೆ ಬಹಳ ಲೋಪದೋಷ ಆಗಿವೆ’ ಎಂದರು.
‘ರಾಜ್ಯದಲ್ಲಿ ನಡೆದಿರುವ ಭ್ರಷ್ಟಾ ಚಾರದ ಬಗ್ಗೆ ಚರ್ಚೆ ನಡೆಸಲು ಸಿದ್ಧ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸವಾಲೆಸೆದಿದ್ದಾರೆ. ಆದರೆ, ಈ ಚರ್ಚೆಯನ್ನು ಅವರ ಪಕ್ಷದ ಅಧ್ಯಕ್ಷರ ಜತೆ ಮಾಡಬೇಕೋ, ಮಾಜಿ ಮುಖ್ಯಮಂತ್ರಿ ಜತೆ ಮಾಡಬೇಕೋ ಎಂದು ತೀರ್ಮಾನಿಸುತ್ತೇವೆ’ ಎಂದು ಅವರು ಹೇಳಿದರು.
‘ಸರ್ಕಾರ ಆರಂಭದಲ್ಲೇ ಕ್ಲೀನ್ ಚಿಟ್ ನೀಡಿದರೆ ಪೊಲೀಸ್ ಅಧಿಕಾರಿಗಳು ಹೇಗೆ ಕೆಲಸ ಮಾಡಲು ಸಾಧ್ಯ’ ಎಂದೂ ಪ್ರಶ್ನಿಸಿದರು.