ಮೈಸೂರು: ‘ತಮಿಳರು ಹೋರಾಡಿ ಸ್ಪರ್ಧಾತ್ಮಕ ಪರೀಕ್ಷೆಗಳು ತಮಿಳಿನಲ್ಲಿ ನಡೆಯುವಂತೆ ಮಾಡಿದರು. ಕರ್ನಾಟಕದಲ್ಲಿ ಇನ್ನೂ ಹೋರಾಟ ನಡೆದಿಲ್ಲ. ಒಂದು ರೀತಿಯಲ್ಲಿ ಕನ್ನಡಿಗರು ನಪುಂಸಕರು’ ಎಂದು ಸಾಹಿತಿ ಕೆ.ಎಸ್.ಭಗವಾನ್ ಹೇಳಿದರು.
ಇಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಮೈಸೂರು ಜಿಲ್ಲಾ ಕನ್ನಡ ಚಳವಳಿಗಾರರ ಸಂಘದ ನೇತೃತ್ವದಲ್ಲಿ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಭಾಗಿಯಾದ ಅವರು, 'ಕನ್ನಡ ಭಾಷೆಯಲ್ಲಿ ಬ್ಯಾಂಕಿಂಗ್ ಪರೀಕ್ಷೆ ನಡೆಸಬೇಕು' ಎಂದು ಆಗ್ರಹಿಸಿದರು.
‘ತಮಿಳುನಾಡಿನ ಎಲ್ಲ ರಾಜಕೀಯ ಪಕ್ಷಗಳು ಒಂದಾಗಿ ಮೇಕೆದಾಟು ಯೋಜನೆ ವಿರುದ್ಧ ಕೇಂದ್ರಕ್ಕೆ ಮನವಿ ಸಲ್ಲಿಸಿವೆ. ಆದರೆ, ರಾಜ್ಯದಲ್ಲಿ ಯೋಜನೆ ಜಾರಿಗೆ ಆಗ್ರಹಿಸಿ ರಾಜಕೀಯ ಪಕ್ಷಗಳು ಒಂದಾಗಿ ಕೇಂದ್ರದ ಜತೆ ಚರ್ಚಿಸಿಲ್ಲ’ ಎಂದು ವಿಷಾದಿಸಿದರು.