ಮೈಸೂರು: 'ಕಾಂಗ್ರೆಸ್ನದ್ದೇ ಪರ್ಸೆಂಟೇಜ್ ಸರ್ಕಾರ. ಸಿದ್ದರಾಮಯ್ಯ ಪರ್ಸೆಂಟೇಜ್ ಕಿಂಗ್. ಅವರೇನು ನಮ್ಮ ಸರ್ಕಾರದ ಬಗ್ಗೆ ಟೀಕೆ ಮಾಡುವುದು?' ಎಂದು ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದರು.
ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಪರ್ಸೆಂಟೇಜ್ ಆರೋಪ ಸಂಬಂಧ ಗುತ್ತಿಗೆದಾರರ ಸಂಘದವರು ದಾಖಲೆ ನೀಡಿದರೆ ತನಿಖೆ ನಡೆಸಲಾಗುವುದು' ಎಂದರು.
ಮಳೆಯಿಂದ ಭಾರಿ ಅನಾಹುತ ಆಗಿದ್ದರೂ ಬಿಜೆಪಿಯವರು ಸಮಾವೇಶ ನಡೆಸಿ ಶಂಖ ಊದುತ್ತಿದ್ದಾರೆಂಬ ಎಚ್. ಡಿ. ಕುಮಾರಸ್ವಾಮಿ ಟೀಕೆಗೆ, 'ಜೆಡಿಎಸ್ನಲ್ಲಿ ಶಂಖ ಊದುವುದಕ್ಕೂ ಯಾರೂ ಇಲ್ಲದಂತಾಗಿದೆ.ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ನವರು ಎಷ್ಟು ಮಂದಿ ಅಭ್ಯರ್ಥಿಗಳನ್ನು ಹಾಕುತ್ತಾರೆ ನೋಡೋಣ' ಎಂದರು.
'ವಿಧಾನಪರಿಷತ್ ಚುನಾವಣೆಯಲ್ಲಿ ಈ ಬಾರಿ 15ರಿಂದ 16ಸ್ಥಾನ ಗೆಲ್ಲಲಿದ್ದೇವೆ. ಈ ಮೂಲಕ ವಿಧಾನ ಪರಿಷತ್ ನಲ್ಲೂ ಬಿಜೆಪಿ ಬಹುಮತ ಹೊಂದಲಿದೆ' ಎಂದು ಹೇಳಿದರು.