ಬೆಂಗಳೂರು: ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಅವರ ಮೂಲಕ ರಾಜ್ಯ ಸರ್ಕಾರ ಸಾರಿಗೆ ನಿಗಮಗಳ ಮುಷ್ಕರದ ಸ್ಥಳಕ್ಕೆ ಸಂಧಾನ ಸೂತ್ರಗಳನ್ನು ಲಿಖಿತವಾಗಿ ಕಳುಹಿಸಿದೆ.
ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಮತ್ತು ಶಾಸಕ ರಾಜು ಗೌಡ ಅವರು ನಂದೀಶ್ ರೆಡ್ಡಿ ಅವರೊಂದಿಗೆ ಇದ್ದಾರೆ. ಪತ್ರದೊಂದಿಗೆ ಮೂವರೂ ಸ್ವಾತಂತ್ರ್ಯ ಉದ್ಯಾನದತ್ತ ಹೊರಟಿದ್ದಾರೆ. ನಂದೀಶ್ ರೆಡ್ಡಿ ಅವರು ಪತ್ರದೊಂದಿಗೆ ಸ್ವಾತಂತ್ರ್ಯ ಉದ್ಯಾನ ತಲುಪಿದ್ದಾರೆ.
ಪತ್ರ ಓದಿದಕೋಡಿಹಳ್ಳಿ ಚಂದ್ರಶೇಖರ್
ಆರನೇ ವೇತನ ಆಯೋಗದ ಶಿಫಾರಸುಗಳ ಜಾರಿ ಕುರಿತು ಸರ್ಕಾರದ ಪ್ರಮುಖರು ಸ್ಪಷ್ಟಪಡಿಸಿದರೆ ಹತ್ತು ನಿಮಿಷಗಳಲ್ಲಿ ಮುಷ್ಕರ ವಾಪಸ್ ಪಡೆಯುವುದಾಗಿ ಸಾರಿಗೆ ನಿಗಮಗಳ ನೌಕರರ ಕೂಟ ಹೇಳಿದೆ.
ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ನೀಡಿದ ಲಿಖಿತ ಭರವಸೆಯ ಪತ್ರವನ್ನು ಕೋಡಿಹಳ್ಳಿ ಚಂದ್ರಶೇಖರ್ ಓದಿದರು. ಬಳಿಕ ಸರ್ಕಾರದ ಪ್ರಮುಖರ ಜತೆ ಮಾತುಕತೆ ನಡೆಸುವುದಾಗಿ ತಿಳಿಸಿ ವೇದಿಕೆಯಿಂದ ಕೆಳಕ್ಕಿಳಿದು ಹಿಂಭಾಗಕ್ಕೆ ತೆರಳಿದ್ದಾರೆ. ದೂರವಾಣಿ ಮೂಲಕ ಮಾತುಕತೆ ಆರಂಭವಾಗಿದೆ.
943 ಬಸ್ ಗಳ ಸಂಚಾರ ಆರಂಭ
ಬೆಂಗಳೂರು: ಸೋಮವಾರ ಮಧ್ಯಾಹ್ನ 12 ಗಂಟೆ ವೇಳೆಗೆ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ 943 ಬಸ್ ಗಳು ಸಂಚಾರ ಆರಂಭಿಸಿವೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ 234, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ 182, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ 286 ಮತ್ತು ವಾಯುವ್ಯ ಕರ್ನಾಟಕ ಸಾರಿಗೆ ನಿಗಮದ 241 ಬಸ್ ಗಳು ಸಂಚಾರ ಆರಂಭಿಸಿವೆ ಎಂದು ಇಲಾಖೆ ಮಾಹಿತಿ ನೀಡಿದೆ.