ಬೆಂಗಳೂರು: ಕರ್ನಾಟಕ ಪೌರಸಭೆಗಳ ಕಾಯ್ದೆ–1964ರಲ್ಲಿ ಕುಷ್ಠ ರೋಗಿಗಳನ್ನು ಮಾರುಕಟ್ಟೆಗಳಿಂದ ಹೊರಹಾಕಲು ಅವಕಾಶ ಕಲ್ಪಿಸಿದ್ದ ಸೆಕ್ಷನ್ 245ಕ್ಕೆ ತಿದ್ದುಪಡಿ ತರುವ ‘ಕರ್ನಾಟಕ ಪೌರಸಭೆಗಳ ತಿದ್ದುಪಡಿ ಮಸೂದೆ–2021’ಕ್ಕೆ ವಿಧಾನ ಪರಿಷತ್ ಬುಧವಾರ ಒಪ್ಪಿಗೆ ನೀಡಿತು.
ವಿಧಾನಸಭೆಯಲ್ಲಿ ಅಂಗೀಕಾರ ಪಡೆದಿದ್ದ ಮಸೂದೆಯನ್ನು ಪೌರಾಡಳಿತ ಸಚಿವರ ಪರವಾಗಿ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ವಿಧಾನ ಪರಿಷತ್ನಲ್ಲಿ ಮಂಡಿಸಿದರು. ಧ್ವನಿಮತದ ಮೂಲಕ ಮಸೂದೆಗೆ ಅಂಗೀಕಾರ ನೀಡಲಾಗಿತ್ತು.
ಕುಷ್ಠ ರೋಗವನ್ನು ಸಂಪೂರ್ಣವಾಗಿ ಗುಣಪಡಿಸುವ ಔಷಧಿಗಳು ಲಭ್ಯವಿಲ್ಲದ ಕಾಲದಲ್ಲಿ ಕಾಯ್ದೆಯನ್ನು ರೂಪಿಸಲಾಗಿತ್ತು. ಗಲಭೆಕೋರರು ಮತ್ತು ಕುಷ್ಠ ರೋಗಿಗಳನ್ನು ಮಾರುಕಟ್ಟೆಯಿಂದ ಹೊರ ಹಾಕಲು ಪೌರಾಡಳಿತ ಸಂಸ್ಥೆಗಳಿಗೆ ಕಾಯ್ದೆಯಲ್ಲಿ ಅವಕಾಶ ನೀಡಲಾಗಿತ್ತು.
‘ಕುಷ್ಠ ರೋಗಿಗಳನ್ನು ಹೊರಹಾಕಬಹುದು‘ ಎಂಬ ಅಂಶವನ್ನು ಕೈಬಿಡುವಂತೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿತ್ತು. ಅದರಂತೆ, ಕಾಯ್ದೆಗೆ ತಿದ್ದುಪಡಿ ತರಲಾಗಿದೆ.