ಕಾರಟಗಿ (ಕೊಪ್ಪಳ ಜಿಲ್ಲೆ): ‘ಬಿಜೆಪಿ ಹೈಕಮಾಂಡ್ ಪರೋಕ್ಷವಾಗಿ ರಾಜ್ಯದ ರಾಜಕೀಯ ನಿರ್ಣಯಗಳನ್ನು ನಿಯಂತ್ರಿಸುತ್ತಿದೆ.ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡದಿದ್ದರೆ ರಾಜ್ಯ ಸರ್ಕಾರವು ಮಠಕ್ಕೆ ಕೊಟ್ಟ ಅನುದಾನ ವಾಪಸ್ ನೀಡಲಾಗುವುದು’ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದರು.
‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಲು ನಿರ್ಧರಿಸಿ, ಅಜರಾಮರರಾಗಿ ಉಳಿಯಬೇಕು. ಮತ್ಯಾರೂ ಮೀಸಲಾತಿಯ ಹೆಜ್ಜೇನಿಗೆ ಕೈ ಹಾಕಲಾರರು. ಅದು ತೀರಾ ಕಷ್ಟದ ಕೆಲಸ’ ಎಂದು ಸುದ್ದಿಗಾರರಿಗೆ ತಿಳಿಸಿದರು.
ಮೀಸಲಾತಿಯಿಂದ ಪಂಚಮಸಾಲಿ ಸಮುದಾಯಕ್ಕೆ ಮುಂದಿನ ದಿನಗಳಲ್ಲಿ ರಾಜಕೀಯ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಅನುಕೂಲವಾಗಲಿದೆ. ಆ ದೂರದೃಷ್ಟಿ ಇಟ್ಟುಕೊಂಡು ಹೋರಾಟಕ್ಕೆ ಅಣಿಯಾಗುತ್ತಿದ್ದೇವೆ ಎಂದರು.