ಬೆಂಗಳೂರು: ಲೋಕಸಭಾ ಸಚಿವಾಲಯವು ಭಾಷಾ ಕಲಿಕಾ ತರಬೇತಿ ಕಾರ್ಯಕ್ರಮದಿಂದ ಕನ್ನಡವನ್ನು ಹೊರಗಿಟ್ಟಿದೆ. ಆ ಮೂಲಕ ಕನ್ನಡವನ್ನು ಕಡೆಗಣಿಸುತ್ತಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.
ಈ ಕುರಿತು ಭಾನುವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಲೋಕಸಭಾ ಸಚಿವಾಲಯದ ‘ಪಾರ್ಲಿಮೆಂಟರಿ ರೀಸರ್ಚ್ ಅಂಡ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಫಾರ್ ಡೆಮಾಕ್ರಸಿ’ (ಪ್ರೈಡ್) ಸಂಸ್ಥೆಯು ಭಾಷಾ ಕಲಿಕೆ ತರಬೇತಿ ಕಾರ್ಯಕ್ರಮದಲ್ಲಿ ಗುಜರಾತಿ, ಬಂಗಾಳಿ, ಮರಾಠಿ, ಒಡಿಯಾ, ತಮಿಳು, ತೆಲುಗು ಭಾಷೆಗಳಿಗೆ ಆದ್ಯತೆ ನಿಡಿದೆ. ಹಲವು ವಿದೇಶಿ ಭಾಷೆಗಳನ್ನೂ ಕಲಿಸಲು ನಿರ್ಧರಿಸಿದೆ. ಆದರೆ, ಕನ್ನಡಕ್ಕೆ ಅವಕಾಶ ನೀಡಿಲ್ಲ’ ಎಂದು ದೂರಿದ್ದಾರೆ.
ಇದೇ ಮಂಗಳವಾರದಿಂದ ವಿವಿಧ ರಾಜ್ಯಗಳ ಸಂಸದರು, ಶಾಸಕರು ಮತ್ತು ಅಧಿಕಾರಿಗಳಿಗೆ ತರಬೇತಿ ಆರಂಭವಾಗಲಿದೆ. ಆದರೆ, ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿಯ 25 ಸಂಸದರು ಈವರೆಗೂ ಧ್ವನಿ ಎತ್ತಿಲ್ಲ. ಬಿಜೆಪಿ ಮೂಲಭೂತವಾಗಿ ಕನ್ನಡ ವಿರೋಧಿ ನಿಲುವು ಹೊಂದಿದೆ. ಆ ಪಕ್ಷದ 25 ಸಂಸದರನ್ನು ಆರಿಸಿ, ಕಳುಹಿಸಿದ ಜನರು ಅದರ ಫಲವನ್ನು ಅನುಭವಿಸಬೇಕಾಗಿದೆ. ಕನ್ನಡವನ್ನು ಕಡೆಗಣಿಸುತ್ತಿರುವುದರ ವಿರುದ್ಧ ಎಲ್ಲರೂ ಧ್ವನಿ ಎತ್ತಲೇಬೇಕಿದೆ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.