ಬೆಂಗಳೂರು: ‘ಕೋವಿಡ್ ಸಮಯದಲ್ಲಿಸಮರ್ಪಕ ಆಡಳಿತ ನಡೆಯಲು ಮಾಧ್ಯಮ ಕ್ಷೇತ್ರ ಕಾರಣ. ಪ್ರಶ್ನಿಸುವ ಹಾಗೂ ಎಲ್ಲ ವಿಷಯಗಳ ಮೇಲೆಸದಾ ಹದ್ದಿನ ಕಣ್ಣಿಟ್ಟಿರುವುದರಿಂದ ಆಡಳಿತ ಸುಸೂತ್ರವಾಗಿದೆ. ಮಾಧ್ಯಮ ಇರದಿದ್ದರೆ ಭಾರಿ ಅನ್ಯಾಯಗಳು ನಡೆದು ಹೋಗುತ್ತಿದ್ದವು’ ಎಂದು ನಟ ರಮೇಶ್ ಅರವಿಂದ್ ಹೇಳಿದರು.
ರಾಷ್ಟ್ರೀಯ ಪತ್ರಿಕಾ ದಿನದ ಅಂಗವಾಗಿಕರ್ನಾಟಕ ಮಾಧ್ಯಮ ಅಕಾಡೆಮಿ ಮಂಗಳವಾರ ಆಯೋಜಿಸಿದ್ದ ‘ಮಾಧ್ಯಮ ಕಂಡರೆ ಯಾರಿಗೆ ಭಯವಿಲ್ಲ?’ ವಿಷಯ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
‘ಕೋಟ್ಯಂತರ ಜನರಿಗೆ ವ್ಯಕ್ತಿಯ ಭಾವನೆ ಮತ್ತು ಚಿಂತನೆಗಳನ್ನು ತಲುಪಿಸುವಲ್ಲಿ ಮಾಧ್ಯಮದ ಪಾತ್ರ ಮಹತ್ವದ್ದು. ವಿಷಯ ತಲುಪಿಸುವ ಏಕೈಕ ಸಾಮರ್ಥ್ಯವನ್ನು ಮಾಧ್ಯಮಗಳು ಹೊಂದಿವೆ’ ಎಂದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಕೆ.ಜಿ. ಜಗದೀಶ್,‘ಮಾಧ್ಯಮಗಳ ಸಹಾಯದಿಂದ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುತ್ತೇವೆ. ಆಡಳಿತದಲ್ಲಿ ಸಾರ್ಥಕ ಸೇವೆಗೆ ಮಾಧ್ಯಮ ರಂಗ ಸಹಕಾರಿಯಾಗಿದೆ’ ಎಂದರು.
ಮಾಧ್ಯಮ ಅಕಾಡೆಮಿ ಅಧ್ಯಕ್ಷ ಕೆ.ಸದಾಶಿವ ಶೆಣೈ,‘ಅಕಾಡೆಮಿ ವತಿಯಿಂದ ‘40ರ ಸಂಭ್ರಮ’ ಸಮಾರಂಭದ ಅಂಗವಾಗಿ 40 ಮಂದಿಗೆ ಸನ್ಮಾನ ಹಾಗೂ 40 ಪುಸ್ತಕಗಳನ್ನು ಹೊರತರುವ ಚಿಂತನೆ ಇದೆ’ ಎಂದರು.
ಪತ್ರಕರ್ತ ಪದ್ಮರಾಜ ದಂಡಾವತಿ,ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಹಾಗೂ ಇತರರು ಭಾಗವಹಿಸಿದ್ದರು.