ಬೆಂಗಳೂರು: ಶಾಲೆಗಳಲ್ಲಿ ಇದೇ 21ರಿಂದ ಮಧ್ಯಾಹ್ನದ ಬಿಸಿಯೂಟ ಆರಂಭಿಸುವ ಮತ್ತು ಭಾನುವಾರ ಕೂಡಾ ಶಾಲೆಗಳನ್ನು ನಡೆಸುವ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರಿಗೆ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮನವಿ ಸಲ್ಲಿಸಿದೆ.
ದಸರಾ ರಜಾ ಅವಧಿ ಮುಗಿದು ಇದೇ 21ರಿಂದ ಶಾಲೆಗಳು ಮತ್ತೆ ಆರಂಭಗೊಳ್ಳುತ್ತಿದೆ. ಅದೇ ದಿನದಿಂದ ಬಿಸಿಯೂಟ ಆರಂಭಿಸುವಂತೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಆದರೆ, ಬಿಸಿಯೂಟ ತಯಾರಿಸಲು ಶಾಲೆಗಳಲ್ಲಿ ರೇಷನ್, ಗ್ಯಾಸ್ ಸಿಲಿಂಡರ್ ಮತ್ತಿತ್ತರ ಸಿದ್ಧತೆ ಆಗಿಲ್ಲ. ಬಿಸಿಯೂಟ ತಯಾರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕಾಗಿದೆ. ಹೀಗಾಗಿ ಶಾಲೆಗಳು ಆರಂಭವಾದ ನಾಲ್ಕುದಿನಗಳ ಬಳಿಕ ಬಿಸಿಯೂಟ ಆರಂಭಿಸಬೇಕು ಎಂದು ಸಂಘ ಮನವಿ ಮಾಡಿದೆ.
ಕೋವಿಡ್ ಸಂದರ್ಭದಲ್ಲೂ ಶಿಕ್ಷಕರು ಆನ್ಲೈನ್, ಆಫ್ಲೈನ್ ತರಗತಿ, ವಿದ್ಯಾಗಮ, ವಠಾರ ಶಾಲೆ, ಕೋವಿಡ್ ಕರ್ತವ್ಯ, ಚೆಕ್ಪೋಸ್ಟ್ ಕೆಲಸ ನಿರ್ವಹಿಸಿದ್ದಾರೆ. ಹೀಗೆ ಶಿಕ್ಷಕರು ನಿರಂತರವಾಗಿ ಕೆಲಸದಲ್ಲಿ ತೊಡಗಿದ್ದಾರೆ. ಮಕ್ಕಳ ಮಾಸಿಕ ದೃಷ್ಟಿಕೋನ ಹಾಗೂ ಶಿಕ್ಷಕರ ಹಿತದೃಷ್ಟಿಯಿಂದ ಭಾನುವಾರ ತರಗತಿ ನಡೆಸುವುದ ನಿರ್ಧಾರವನ್ನು ಕೈಬಿಡಬೇಕು ಎಂದು ಸಂಘದ ಅಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ಮತ್ತು ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.