ಬೆಂಗಳೂರು: ‘ಸಚಿವ ಸೋಮಣ್ಣ ಸುಳ್ಳುಗಾರ. ಅವರ ಬಗ್ಗೆ ಚರ್ಚೆ ಮಾಡದಿರುವುದೇ ಒಳ್ಳೆಯದು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದರು.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಗೋವಿಂದರಾಜನಗರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಪಾಲಿಕೆ ಮಾಜಿ ಸದಸ್ಯ ಜೆಡಿಎಸ್ನ ಡಿ. ಉಮಾಶಂಕರ್ ಮತ್ತು ಅವರ ಬೆಂಬಲಿಗರು ಸೇರಿ ಸುಮಾರು 30 ಮಂದಿಯನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡು ಅವರು ಮಾತನಾಡಿದರು.
‘ನಾನು ಮುಖ್ಯಮಂತ್ರಿಯಾಗಿದ್ದಾಗ ಬಡವರ ಪರವಾದ ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದೇನೆ. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಎಲ್ಲವನ್ನು ನಿಲ್ಲಿಸುತ್ತಿದೆ. ವಸತಿ ಸಚಿವ ವಿ. ಸೋಮಣ್ಣ ಒಬ್ಬ ಸುಳ್ಳುಗಾರ. ಬಡ ಜನರಿಗೆ ಮನೆ ನಿರ್ಮಿಸು ಎಂದರೆ ಕಮಿಷನ್ ಪಡೆದು ತನ್ನ ಮನೆ ಕಟ್ಟಿಸಿಕೊಳ್ಳುತ್ತಿದ್ದಾನೆ’ ಎಂದರು.
‘ಗೋವಿಂದರಾಜನಗರ ಕ್ಷೇತ್ರದಲ್ಲಿ ಪ್ರಿಯಕೃಷ್ಣ ಅವರು ಸೋಮಣ್ಣ ವಿರುದ್ಧ ಗೆಲ್ಲುವುದು ನೂರಕ್ಕೆ ನೂರು ಖಚಿತ. ಅಷ್ಟೇ ಅಲ್ಲ, ಎಂ. ಕೃಷ್ಣಪ್ಪ ಅವರು ಕೂಡಾ ವಿಜಯನಗರ ಕ್ಷೇತ್ರದಿಂದ ಗೆಲ್ಲಲಿದ್ದಾರೆ. ಆ ಮೂಲಕ, ರಾಜ್ಯದಲ್ಲಿ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ’ ಎಂದು ವಿಶ್ವಾಸವ್ಯಕ್ತಪಡಿಸಿದರು.