ಆಗಸ್ಟ್ 25ರಂದು ಗೌಳಿವಾಡ ಗ್ರಾಮ ಹೊರವಲಯದ ಮರಕ್ಕೆ ನೇತು ಹಾಕಿದ ಪ್ಲಾಸ್ಟಿಕ್ ಚೀಲದಲ್ಲಿ ಹಸುಳೆಯೊಂದು ಪತ್ತೆಯಾಗಿತ್ತು. ಗ್ರಾಮದ ಆಶಾ ಕಾರ್ಯಕರ್ತೆ ಸತ್ಯವತಿ ದೇಸಾಯಿ ಎನ್ನುವವರು, ಮಗು ಅಳುವ ಶಬ್ದ ಕೇಳಿ ಅದನ್ನು ರಕ್ಷಿಸಿದ್ದರು. ಆಂಬುಲೆನ್ಸ್ ಮೂಲಕ ಹಸುಳೆಯನ್ನು ಖಾನಾಪುರ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿದ್ದರು. ಅದಾಗಲೇ ಕೂಸು ತೀವ್ರ ನಿತ್ರಾಣಗೊಂಡಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಸದ್ಯ ಹಸುಳೆಗೆ ಜಿಲ್ಲಾಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.