ಸವದತ್ತಿ (ಬೆಳಗಾವಿ ಜಿಲ್ಲೆ): ಅನಾರೋಗ್ಯದಿಂದಾಗಿ ಶನಿವಾರ ರಾತ್ರಿ ನಿಧನರಾಗಿದ್ದ ವಿಧಾನಸಭೆಯ ಉಪಸಭಾಧ್ಯಕ್ಷ ಆನಂದ ಮಾಮನಿ (56) ಅವರ ಅಂತ್ಯಕ್ರಿಯೆ, ಇಲ್ಲಿನ ಯಡ್ರಾಂವಿ ರಸ್ತೆಯಲ್ಲಿರುವ ಅವರ ತೋಟದಲ್ಲಿ ಭಾನುವಾರ ಸಂಜೆ ನಡೆಯಿತು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸೇರಿದಂತೆ ರಾಜ್ಯದ ಹಲವು ಸಚಿವರು, ಶಾಸಕರು, ಮಠಾಧೀಶರು ಅಂತಿಮ ದರ್ಶನ ಪಡೆದರು. ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು.
ಬಸವರಾಜ ಬೊಮ್ಮಾಯಿ ಅವರು ಆನಂದ ಮಾಮನಿ ಅವರ ಪತ್ನಿ ರತ್ನಾ ಅವರಿಗೆ ರಾಷ್ಟ್ರಧ್ವಜ ಹಸ್ತಾಂತರಿಸಿದರು
ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಸರ್ಕಾರಿ ಗೌರವ ಸಲ್ಲಿಸಿದರು. ಪಾರ್ಥಿವ ಶರೀರಕ್ಕೆ ಹೊದಿಸಿದ್ದ ರಾಷ್ಟ್ರಧ್ವಜವನ್ನು ಮುಖ್ಯಮಂತ್ರಿ ಅವರು ಆನಂದ ಅವರ ಪತ್ನಿ ರತ್ನಾ ಅವರಿಗೆ ಹಸ್ತಾಂತರಿಸಿದರು. ಇದಕ್ಕೂ ಮೊದಲು ಪಾರ್ಥಿವ ಶರೀರವನ್ನು ಮೆರವಣಿಗೆಯಲ್ಲಿ ತರಲಾಯಿತು.
ಆನಂದ ಅವರ ತಂದೆ ಚಂದ್ರಶೇಖರ ಮತ್ತು ಸಹೋದರ ಬಾಪು ಅವರ ಸಮಾಧಿಗಳು ಇದೇ ತೋಟದಲ್ಲಿವೆ. ತಂದೆ ಸಮಾಧಿಯ ಪಕ್ಕದಲ್ಲೇ ಆನಂದ ಅವರನ್ನೂ ಸಮಾಧಿ ಮಾಡಲಾಯಿತು.
ವಿವಿಧ ಮಠಾಧೀಶರು ಲಿಂಗಾಯತ– ಪಂಚಮಸಾಲಿ ವಿಧಾನಗಳನ್ನು ಅನುಸರಿಸಿದರು. ಆನಂದ ಅವರ ತಾಯಿ ಗಂಗಮ್ಮ, ಪತ್ನಿ ರತ್ನಾ, 15 ವರ್ಷದ ಪುತ್ರಿ ಚೇತನಾ, 13 ವರ್ಷದ ಪುತ್ರ ಚಿನ್ಮಯ ಅವರನ್ನು ಜನ ಸಂತೈಸಿದರು.
ಅಕಾಲಿಕ ಅಗಲಿಕೆ: ಚಂದ್ರಶೇಖರ ಮತ್ತು ರತ್ನಮ್ಮ ದಂಪತಿ ಪುತ್ರನಾಗಿ 1966ರ ಜನವರಿ 18ರಂದು ಜನಿಸಿದ್ದರು. 2008ರಲ್ಲಿ ಮೊದಲು ವಿಧಾನಸಭೆಗೆ ಆಯ್ಕೆಯಾಗಿದ್ದರು. 2013, 2018ರಲ್ಲಿಯೂ ಪುನರಾಯ್ಕೆಯಾಗಿ ಹ್ಯಾಟ್ರಿಕ್ ಸಾಧನೆ ಮಾಡಿದ್ದರು.