‘ಮುರುಘಾ ಶರಣರು ನಾಡಿನ ಪ್ರಭಾವಿ ಮಠಾಧೀಶರಾಗಿದ್ದಾರೆ. ಹೀಗಾಗಿ, ಈ ಪ್ರಕರಣದಲ್ಲಿ ತನಿಖೆ ನಡೆಸಬೇಕಾದ ಪೊಲಿಸರು ಇನ್ನೂ ಅವರನ್ನು ವಿಚಾರಣೆಗೆ ಬರಮಾಡಿಕೊಂಡಿಲ್ಲ. ದಸ್ತಗಿರಿ ಮಾಡಿಲ್ಲ. ಏತನ್ಮಧ್ಯೆ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಮುರುಘಾ ಮಠಕ್ಕೆ ಹೋಗಿ ಶರಣರನ್ನು ಭೇಟಿ ಮಾಡಿ ಬಂದಿದ್ದಾರೆ. ಅವರನ್ನು ಬೆಂಬಲಿಸುವ ಮಾತುಗಳನ್ನಾಡಿ ಅವರ ರಕ್ಷಣೆಗೆ ನಿಂತಿದ್ದಾರೆ. ಅಂತೆಯೇ ರಾಜ್ಯ ಗೃಹಮಂತ್ರಿ ಆರಗ ಜ್ಞಾನೇಂದ್ರ ಅವರೂ ಹೇಳಿಕೆಯೊಂದನ್ನು ನೀಡಿ, ಈ ಪ್ರಕರಣದಲ್ಲಿ ಮಠದ ನೌಕರನ ಪಿತೂರಿ ಇದೆ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ಅಂಶಗಳನ್ನು ಗಮನಿಸಿದರೆ ಸರ್ಕಾರ ಆರೋಪಿ ಶರಣರ ಹಿತ ಕಾಪಾಡುವಲ್ಲಿ ಸಜ್ಜಾಗಿ ನಿಂತಿರುವುದು ಕಂಡು ಬರುತ್ತಿದೆ’ಎಂದು ವಕೀಲರು ಆರೋಪಿಸಿದ್ದಾರೆ.