ಬಾಗಲಕೋಟೆ: ‘ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬಾರದು ಎಂದು ಎಲ್ಲಿಯಾದ್ರು ನಾನು ಹೇಳಿದ್ದನ್ನು ಸಾಬೀತು ಪಡಿಸಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ’ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ, ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿಗೆ ಸವಾಲು ಹಾಕಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಮಾಜದ ಸಚಿವರಿಂದ ಮೀಸಲಾತಿ ಘೋಷಣೆ ತಪ್ಪಿತು ಎಂದು ಸ್ವಾಮೀಜಿ ಪದೇಪದೇ ಹೇಳುತ್ತಾರೆ. ಅದನ್ನು ಸಾಬೀತು ಪಡಿಸಲು ಸಾಧ್ಯವಾಗದಿದ್ದರೆ ಅವರು ಪೀಠ ಬಿಟ್ಟು ರಾಜಕಾರಣಕ್ಕೆ ಬರಲಿ’ ಎಂದು ಆಗ್ರಹಿಸಿದರು.
‘ಸ್ವಾಮೀಜಿ ಬಗ್ಗೆ ಅಪಾರ ಗೌರವವಿದೆ. ರಾಜ್ಯದಲ್ಲಿ ಸಮಾಜದ 80 ಲಕ್ಷ ಜನರು ಇರುವುದರಿಂದ ಎರಡು ಪೀಠ ಮಾಡಿದೆವು. ಮೂರನೇ ಪೀಠವನ್ನೂ ನಾನೇ ಮಾಡಿದ್ದೇನೆ. ಇನ್ನೂ ಎರಡು ಪೀಠ ಮಾಡುತ್ತೇನೆ. ಪೀಠ ಹುಟ್ಟುವ ಮೊದಲೇ ಮಂತ್ರಿಯಾಗಿದ್ದೆ’ ಎಂದು ತಿರುಗೇಟು ನೀಡಿದರು.