ಬಾಗಲಕೋಟೆ: ’ನಾನು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಲ್ಲ. 2023ರವರೆಗೂ ಬಸವರಾಜ ಬೊಮ್ಮಾಯಿ ಅವರೇ ಮುಖ್ಯಮಂತ್ರಿ ಆಗಿ ಮುಂದುವರೆಯುತ್ತಾರೆ. ಅವರು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ‘ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಹೇಳಿದರು.
’ಬಸವರಾಜ ಬೊಮ್ಮಾಯಿ 2023ರೊಳಗೆ ಕೇಂದ್ರ ಸಚಿವ ಆಗಲಿದ್ದಾರೆ ಎಂದು ನಾನು ಹೇಳಿಲ್ಲ. ಮುಂಬರುವ ದಿನಗಳಲ್ಲಿ ಅವರಿಗೆ ಕೇಂದ್ರದಲ್ಲಿ ಉನ್ನತ ಸ್ಥಾನ ಸಿಗಲಿದೆ ಎಂದು ಹೇಳಿದ್ದೇನೆ‘ ಎಂದು ಶನಿವಾರ ಇಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
‘ನೀವು (ಮಾಧ್ಯಮದವರು) ದಯವಿಟ್ಟು ಬೇರೆಯವರ ಮನಸ್ಸಿಗೆ ನೋವು ಮಾಡಿ ಆನಂದ ಪಡಬೇಡಿ ಎಂದು ಸಲಹೆ ನೀಡಿದ ನಿರಾಣಿ, ’ನಾನು ಶೀಘ್ರ ಸಿಎಂ ಆಗುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ನಾನು ಹಾಗೆ ಹೇಳಿದ್ದರೆ ಮಾತ್ರ ನೀವು ನನ್ನ ಪ್ರಶ್ನಿಸಬೇಕು‘ ಎಂದು ಬೇಸರ ವ್ಯಕ್ತಪಡಿಸಿದರು.
’ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವೈರಾಗ್ಯದ ಭಾಷಣ ಮಾಡಿರುವ ಬಗ್ಗೆ ನನ್ನ ಕೇಳಬೇಡಿ. ಅದನ್ನು ಅವರಿಗೆ ಕೇಳಿ. ಅವರು ಬದಲಾವಣೆ ಆಗೊಲ್ಲ. ಸಚಿವ ಈಶ್ವರಪ್ಪನವರು ಸಿಎಂ ಸ್ಥಾನದ ಬಗ್ಗೆ ಮಾತನಾಡಿದ ನಂತರ ನಾನು ಎರಡು ಬಾರಿ ಸ್ಪಷ್ಟನೆ ನೀಡಿದ್ದೇನೆ‘ ಎಂದರು.
’ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನನಗೆ ಹಿರಿಯ ಅಣ್ಣನಂತಿದ್ದಾರೆ. ನನಗೂ ಅವರಿಗೂ ಕಳೆದ 30 ವರ್ಷಗಳಿಂದ ಕೌಟುಂಬಿಕ ಸಂಬಂಧವಿದೆ. ನನ್ನ ವೈಯಕ್ತಿಕ ಸಮಸ್ಯೆಗಳು ಏನಾದರೂ ಇದ್ದರೂ ಮೊದಲಿಗೆ ನಾನು ಅವರ ಬಳಿಯೇ ಹೇಳಿಕೊಳ್ಳುವೆ. ಹುಬ್ಬಳ್ಳಿಗೆ ಹೋದರೆ ಅವರ ಮನೆಗೆ ಹೋಗಿ ಚಹಾ ಕುಡಿಯದೇ ಮುಂದೆ ಹೋಗುವುದಿಲ್ಲ. ನನ್ನ ಹಾಗೂ ಅವರ ಮಧ್ಯೆ ಒಳ್ಳೆಯ ಸಂಬಂಧವಿದೆ. ಕಾಣದ ಕೈಗಳು ಆ ಸಂಬಂಧ ದೂರ ಮಾಡುವ ಕೆಲಸ ಮಾಡುತ್ತಿರಬಹುದು‘ ಎಂದು ಪ್ರಶ್ನೆಯೊಂದಕ್ಕೆ ನಿರಾಣಿ ಪ್ರತಿಕ್ರಿಯಿಸಿದರು.
ಆ ಕಾಣದ ಕೈಗಳು ನಿಮ್ಮ ಪಕ್ಷದವರೇನಾ? ಎಂದಾಗ, ’ನನಗೆ ಗೊತ್ತಿಲ್ಲ. ಇರಬಹುದು ಅಥವಾ ಇರಲಿಕ್ಕಿಲ್ಲ‘ ಎಂದು ನುಣುಚಿಕೊಂಡರು.