ಚಿತ್ರದುರ್ಗ: ಮುರುಘಾಮಠದಲ್ಲಿ ನಡೆದಿದ್ದ ಲೈಂಗಿಕ ದೌರ್ಜನ್ಯ ಪ್ರಕರಣದ ನಾಲ್ಕನೇ ಆರೋಪಿ, ಎಸ್ಜೆಎಂ ವಿದ್ಯಾಪೀಠದ ಮಾಜಿ ಕಾರ್ಯದರ್ಶಿ ಪರಮಶಿವಯ್ಯ ಕೊನೆಗೂ ಶನಿವಾರ ಪೊಲೀಸ್ ಬಲೆಗೆ ಬಿದ್ದಿದ್ದಾರೆ. ಇವರುಎರಡು ತಿಂಗಳಿಂದ ತಲೆಮರೆಸಿಕೊಂಡಿದ್ದರು.
ಡಿವೈಎಸ್ಪಿ ಕಚೇರಿಯಲ್ಲಿ ವಿಚಾರಣೆ ಬಳಿಕ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಚಿತ್ರದುರ್ಗದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ಗೆ ಆರೋಪಿಯನ್ನು ಹಾಜರುಪಡಿಸಿದ್ದು, ಕೋರ್ಟ್ ನ.3ರವರೆಗೂ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿತು.
ಅನಾರೋಗ್ಯ ಹಿನ್ನೆಲೆಯಲ್ಲಿ ಆರೋಪಿಗೆ ವೈದ್ಯಕೀಯ ಸೇವೆ ಹಾಗೂ ಸೂಕ್ತ ಆಹಾರ ಒದಗಿಸಲು ಆರೋಪಿ ಪರ ವಕೀಲರು ಕೋರಿದರು. ಅಗತ್ಯವಿದ್ದಲ್ಲಿ ಇವುಗಳನ್ನು ಒದಗಿಸಲು ಕೋರ್ಟ್ ಸೂಚಿಸಿತು.
ಶಿವಮೂರ್ತಿ ಮುರುಘಾ ಶರಣರು ಸೇರಿ ಐವರ ವಿರುದ್ಧ ಪೋಕ್ಸೊ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ ಆಗಸ್ಟ್ 28ರಂದು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.