ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ: ದಸರಾ ಸಂಭ್ರಮಕ್ಕೆ ನಿರ್ಬಂಧ, ರಾಜ್ಯ ಸರ್ಕಾರದಿಂದ ಮಾರ್ಗಸೂಚಿ

Last Updated 14 ಅಕ್ಟೋಬರ್ 2020, 19:31 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಾದ್ಯಂತ ಅ.17 ರಿಂದ 26ರವರೆಗೆ ನಡೆಯಲಿರುವ ನಾಡಹಬ್ಬ ದಸರಾ ಆಚರಣೆ ವೇಳೆ ಮೈಸೂರು ಬಿಟ್ಟು ಉಳಿದ ಕಡೆಗಳಲ್ಲಿ 100ಕ್ಕಿಂತ ಹೆಚ್ಚು ಜನ ಸೇರದಂತೆ ರಾಜ್ಯ ಸರ್ಕಾರ ನಿರ್ಬಂಧ ವಿಧಿಸಿದೆ.

ಅಲ್ಲದೆ, ವ್ಯಕ್ತಿಗತ ಅಂತರ ಇಲ್ಲದೆ ನಡೆಯುವ ಕಾರ್ಯಕ್ರಮಗಳಿಗೂ ನಿಷೇಧ ಹೇರಲಾಗಿದೆ. ಕೋವಿಡ್ ಹರಡುತ್ತಿರುವ ಕಾರಣ, ಜಿಲ್ಲಾಡಳಿತ ವಹಿಸಬೇಕಾದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ರಾಜ್ಯ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಬುಧವಾರ ಮಾರ್ಗಸೂಚಿ ಹೊರಡಿಸಿದ್ದಾರೆ.

‘ನವರಾತ್ರಿ ಮತ್ತು ದುರ್ಗಾ ಪೂಜೆಯ ಆಚರಣೆಗೂ ಈ ಮಾರ್ಗಸೂಚಿ ಅನ್ವಯ ಆಗಲಿದೆ.ದಸರಾ ಆಚರಣೆಗೆ ಮೊದಲೇ ನಿರ್ಬಂಧಗಳ ಕುರಿತು ವ್ಯಾಪಕ ಪ್ರಚಾರ ನೀಡಬೇಕು’ ಎಂದೂ ಅವರು ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ: ಮೈಸೂರು ದಸರಾ ಹಬ್ಬದ ಆಚರಣೆಯನ್ನು ದೃಶ್ಯ ಸಂವಹನ (ವರ್ಚುವಲ್‌) ಮೂಲಕ ವೀಕ್ಷಿಸಲು ಅವಕಾಶ ಕಲ್ಪಿಸಿರುವುದರಿಂದ, ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.

17ರಂದು ಚಾಮುಂಡಿ ಬೆಟ್ಟದಲ್ಲಿ ಮುಖ್ಯಮಂತ್ರಿ ಮತ್ತು ಗಣ್ಯರಿಂದ ಮೈಸೂರು ದಸರಾ ಉದ್ಘಾಟನೆ ನಡೆಯಲಿದ್ದು, ಈ ಸಂದರ್ಭದಲ್ಲಿ ಅಧಿಕಾರಿಗಳು, ಸಿಬ್ಬಂದಿ, ಕಲಾವಿದರು, ಮಾಧ್ಯಮದವರು ಸೇರಿ 200 ಜನರು, 26ರಂದು ಅರಮನೆ ಆವರಣದಲ್ಲಿ ನಡೆಯಲಿರುವ ಜಂಬೂ ಸವಾರಿಯಲ್ಲಿ 300 ಜನರಿಗೆ ಮಾತ್ರ ಪ್ರವೇಶ ಅವಕಾಶ ನೀಡಲಾಗಿದೆ. 17ರಿಂದ 24ರವರೆಗೆ ಅರಮನೆ ಆವರಣದಲ್ಲಿ ನಡೆಯಲಿರುವ 2 ಗಂಟೆ ಅವಧಿಯ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಗರಿಷ್ಠ 50 ಜನರಿಗೆ ಅನುಮತಿ ನೀಡಲಾಗಿದೆ.

ಆಚರಣೆಯಲ್ಲಿ ಭಾಗವಹಿಸುವವರು ಅ. 14ರ ನಂತರ ಕೋವಿಡ್‌ ತಪಾಸಣೆ (ಆರ್‌ಟಿಪಿಸಿಆರ್‌) ನಡೆಸಿ ಸೋಂಕು ಇಲ್ಲದಿರುವ ಬಗ್ಗೆ ಪ್ರಮಾಣ ಪತ್ರ ಪಡೆಯಲೇಬೇಕು. ಮಾಸ್ಕ್‌ ಧರಿಸದಿದ್ದರೆ ದಂಡ ವಿಧಿಸಲಾಗುವುದು. ಈ ಷರತ್ತುಗಳಲ್ಲದೆ, ಹಬ್ಬದ ಆಚರಣೆಗೆ ಅಗತ್ಯವಾದ ಸುರಕ್ಷತಾ ಕ್ರಮಗಳನ್ನು ಜಿಲ್ಲಾಡಳಿತ ವಹಿಸಬೇಕು ಎಂದೂ ಆದೇಶದಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT