ಮೈಸೂರು: ದಸರಾ ಕುಸ್ತಿ ಪಂದ್ಯಾವಳಿ ಸೆ.26ರಿಂದ ಅ.2ರವರೆಗೆ ನಡೆಯಲಿರುವ ಹಿನ್ನೆಲೆಯಲ್ಲಿ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಭಾನುವಾರ ಕುಸ್ತಿಪಟುಗಳ ಜೋಡಿ ಕಟ್ಟುವ ಕಾರ್ಯ ನಡೆಯಿತು.
ಕಾಳಿಂಗರಾವ್ ಭವನದಲ್ಲಿ ಕುಸ್ತಿಪಟುಗಳಿಗೆ ಬೆನ್ನುತಟ್ಟುವ ಮೂಲಕ ಜೋಡಿ ಕಟ್ಟುವ ಕಾರ್ಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಚಾಲನೆ ನೀಡಿದರು.
ನಗರವೂ ಸೇರಿದಂತೆ ನಾಡಿನ ವಿವಿಧ ಗರಡಿ ಮನೆಗಳಿಂದ 200ಕ್ಕೂ ಹೆಚ್ಚು ಪೈಲ್ವಾನರು ಪಂದ್ಯಾವಳಿಯಲ್ಲಿ ಭಾಗವಹಿಸಲು ಆಗಮಿಸಿದ್ದು, ಅರ್ಜಿ ಹಾಗೂ ಪೂರಕ ದಾಖಲೆಗಳನ್ನು ನೀಡಿದರು.
ನಂತರ ಚಿಣ್ಣರು, ಪೈಲ್ವಾನರು ಗದೆ ತಿರುಗಿಸುವ, ಕಲ್ಲು ಗುಂಡು ಎತ್ತುವ, ದಂಡ ಹೊಡೆಯುವ ಸ್ಪರ್ಧೆ ಸೇರಿದಂತೆ ಹಲವು ಸ್ಪರ್ಧೆಗಳಲ್ಲಿ ಭಾಗಿಯಾದರು. ಪುರುಷರು ಹಾಗೂ ಮಹಿಳೆಯರಿಗೆ ಸ್ಪರ್ಧೆಗಳು ನಡೆದವು.
ಕಾರ್ಯಕ್ರಮದಲ್ಲಿ ಗಣ್ಯರಿಗೆ ಪೇಟ ತೊಡಿಸಲಾಯಿತು.
ಸಂಸದ ಪ್ರತಾಪಸಿಂಹ, ಮೇಯರ್ ಶಿವಕುಮಾರ್, ಶಾಸಕ ಜಿ.ಟಿ.ದೇವೇಗೌಡ, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್, ಎಎಸ್ಪಿ ಬಿ.ಎನ್.ನಂದಿನಿ ಇದ್ದರು.