ಮಂಗಳೂರು:ದೇಶದ ಎಲ್ಲ ಹಗರಣಗಳ ಹಿಂದೆ ಕಾಂಗ್ರೆಸ್ಸಿನ ಕೈ ಇರುವಂತೆ, ದೇಶದ ಎಲ್ಲಾ ಗಲಭೆಗಳ ಹಿಂದೆಯೂ ಕಾಂಗ್ರೆಸ್ ನಾಯಕರ ಕೈ ಇರುತ್ತದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿದ್ದಾರೆ.
‘ಅಧಿಕಾರದಲ್ಲಿದ್ದಾಗ ದೇಶ ವಿರೋಧಿಗಳಿಗೆ ಬೆಂಬಲ ನೀಡುವುದು, ಗಲಭೆಕೋರರ ಮೇಲಿನ ಪ್ರಕರಣಗಳನ್ನು ರದ್ದು ಮಾಡುವುದು, ಅಧಿಕಾರ ಕಳೆದುಕೊಂಡಾಗ ದೇಶದಲ್ಲಿ ಗಲಭೆ ಎಬ್ಬಿಸಿ ಸಮಾಜದ ಶಾಂತಿ ಕದಡಿ... ಆಡಳಿತ ಪಕ್ಷದ ಮೇಲೆ ಗೂಬೆ ಕೂರಿಸುವುದು. ಇದು ಕಾಂಗ್ರೆಸ್ ನಾಯಕರ ಸಿದ್ಧಾಂತ’ ಎಂದಿದ್ದಾರೆ.
‘ಸಮಾಜದಲ್ಲಿ ಬೆಂಕಿ ಹಚ್ಚುವ ಸಮಾಜಘಾತುಕರನ್ನು ಮಟ್ಟಹಾಕಿ ಶಾಂತಿಯುತ ಸಮಾಜ ಕಟ್ಟಬೇಕಾದ ರಾಷ್ಟ್ರೀಯ ಪಕ್ಷವೊಂದು ರಾಜಕೀಯ ಲಾಭಕ್ಕಾಗಿ ಬೆಂಕಿ ಇಡುವ ಕೆಲಸಕ್ಕೆ ಇಳಿದಿರುವುದು ಅತ್ಯಂತ ಹೀನಾಯ.!!’ ಎಂದು ದೂರಿದ್ದಾರೆ.