ಬೆಂಗಳೂರು: ‘ಕಾವ್ಯ ಮತ್ತು ಕಲಾಕೃತಿ ಜೊತೆ ಜೊತೆಯಲಿ ಸಾಗಬೇಕು. ಕಾವ್ಯಕ್ಕೆ ಅರ್ಥವಿದೆಯೊ ಇಲ್ಲವೊ ಗೊತ್ತಿಲ್ಲ. ಆದರೆ ಅದಕ್ಕೊಂದು ಕಲಾಕೃತಿ ಬಳಸಿಕೊಳ್ಳಬೇಕು. ಅದು ನನ್ನ ಸಿದ್ಧಾಂತವೂ ಆಗಿತ್ತು’ ಎಂದು ಲೇಖಕ ಆರ್.ಜಿ.ಹಳ್ಳಿ ನಾಗರಾಜ್ ತಿಳಿಸಿದರು.
ಲೇಖಕ ನಟರಾಜ್ ಹುಳಿಯಾರ್ ಅವರ ‘ಕವಿಜೋಡಿಯ ಆತ್ಮಗೀತ’ ಕಥಾಕಾವ್ಯ ಬಿಡುಗಡೆಗೊಳಿಸಿ ಅವರು ಶನಿವಾರ ಮಾತನಾಡಿದರು.
‘ಕವಿತೆಯಂತೆ ಕಲಾಕೃತಿಯೂ ಅಮೂರ್ತವಾಗಿ ಕಾಡುತ್ತಿರಬೇಕು’ ಎಂದರು.
‘ಕನ್ನಡದ ಕಾವ್ಯ ಪ್ರಕಾರದಲ್ಲೇ ವಿಶಿಷ್ಟವಾದ ಕಾವ್ಯವೊಂದನ್ನು ನಟರಾಜ್ ರಚಿಸಿದ್ದಾರೆ. ದಂಪತಿಗಳ ಕಥೆಯನ್ನು ಪ್ರಸ್ತುತಪಡಿಸಿರುವ ರೀತಿಯೂ ವಿಭಿನ್ನವಾಗಿದೆ. ಅಮೆರಿಕದ ಕವಯತ್ರಿ ಸಿಲ್ವಿಯಾ ಪ್ಲಾತ್ ತನ್ನ 31ನೇ ವಯಸ್ಸಿನಲ್ಲೇ ಅಸುನೀಗಿದ್ದಳು. ಆಕೆ ರಚಿಸಿರುವ ‘ಡ್ಯಾಡಿ’ ಎಂಬ ಪದ್ಯ ತುಂಬಾ ಚೆನ್ನಾಗಿದೆ’ ಎಂದು ಕವಯತ್ರಿಎಚ್.ಎಲ್. ಪುಷ್ಪಾ ಹೇಳಿದರು.
‘ಕವಿ ಪಾತ್ರಗಳನ್ನು ಸೃಷ್ಟಿಸುವುದಿಲ್ಲ.ಪಾತ್ರಗಳೇ ಕವಿಯನ್ನು ಸೃಷ್ಟಿಮಾಡುತ್ತವೆ’ ಎಂದು ನಟರಾಜ್ ಹುಳಿಯಾರ್ ಅಭಿಪ್ರಾಯಪಟ್ಟರು.
‘ಕವಿ ಬದುಕಿನ ಕಮ್ಮಟದಲ್ಲಿ ಅರಳಿದ ಅಮೂಲ್ಯಪ್ರತಿಭೆಗಳಾದಅಮೆರಿಕದಸಿಲ್ವಿಯಾ ಪ್ಲಾತ್ ಮತ್ತು ಇಂಗ್ಲೆಂಡ್ನ ಟೆಡ್ ಹ್ಯೂಸ್ ಅವರ ಅನನ್ಯ ರೂಪಕಗಳು, ಕುಸಿದ ಅವರ ಬದುಕು, ಬರೆಸಿದ ಕಥಾ ಕಾವ್ಯವೇ ‘ಕವಿಜೋಡಿಯ ಆತ್ಮಗೀತ’. ಈ ಪುಸ್ತಕ ಸಿಕ್ಕಿದ್ದು ಆಕಸ್ಮಿಕ. ಅದು ಸಿಗದೆ ಹೋಗಿದ್ದರೆ ನಾನು ಟೆಡ್ಹ್ಯೂಸ್ ಬೆನ್ನತ್ತಿ ಹೋಗುತ್ತಿರಲಿಲ್ಲ’ ಎಂದರು.
‘ಕಾವ್ಯವೇಬದುಕೆಂಬಂತೆ ಕಂಡಿದ್ದ ಈ ದಂಪತಿ ಕವಿತೆ, ಕತೆ, ನಾಟಕ ಹೀಗೆ ಹಲವು ಪ್ರಕಾರಗಳಲ್ಲಿ ಬರೆದರು. ಕ್ರಮೇಣ ಅವರ ಬದುಕಿನಲ್ಲಿ ಏರುಪೇರುಗಳಾದವು. ಟೆಡ್ಹ್ಯೂಸ್ನಿಂದ ಬೇರೆಯಾದ ಸಿಲ್ವಿಯಾ, ಒಂದು ರಾತ್ರಿ ತನ್ನೆರಡು ಪುಟ್ಟ ಮಕ್ಕಳನ್ನು ಬಿಟ್ಟು ಬದುಕು ಕೊನೆಗಾಣಿಸಿಕೊಂಡಳು’ ಎಂದು ಹೇಳಿದರು.