ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಎಸ್‌ಎಸ್‌ ಶೈಲಿಯ ಸಾಂಸ್ಥಿಕ ರಚನೆ ಅಗತ್ಯ : ದೇವನೂರ ಮಹಾದೇವ

‘ಸ್ವತಂತ್ರ ಅಧ್ಯಯನ ವರದಿ’ ಬಿಡುಗಡೆ ಮಾಡಿದ ದೇವನೂರ ಮಹಾದೇವ
Last Updated 14 ಫೆಬ್ರುವರಿ 2023, 17:54 IST
ಅಕ್ಷರ ಗಾತ್ರ

ಮೈಸೂರು: ‘ರಾಜ್ಯದ ಮುಂಚೂಣಿ ಸಮಾಜಮುಖಿ ರಾಜಕೀಯ ಪಕ್ಷಗಳಿಗೆ ಆರ್‌ಎಸ್‌ಎಸ್‌ ಶೈಲಿಯ ಸಾಂಸ್ಥಿಕ ರಚನೆಯ ತಳಪಾಯ ಹಾಗೂ ರಾಜಕೀಯ ಪ್ರಜ್ಞೆ ಅತ್ಯಗತ್ಯ’ ಎಂದು ಲೇಖಕ ದೇವನೂರ ಮಹಾದೇವ ಪ್ರತಿಪಾದಿಸಿದರು.

ನಗರದಲ್ಲಿ ಮಂಗಳವಾರ ಪ್ರೊ.ಮಧುದಂಡವತೆ ಶತಮಾನೋತ್ಸವ ಪ್ರಯುಕ್ತ ‘ಮುಕ್ತ ಮತದಾನ– ಸಮರ್ಥ ಸರ್ಕಾರ’ – ಜನತಂತ್ರದ ‘ನೈಜ ಹಕ್ಕುದಾರರ ಧ್ವನಿ ಹಿಡಿದಿಡುವ ಡಯಗ್ನಾಸ್ಟಿಕ್‌ ವರದಿ’ಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. ಬೆಂಗಳೂರಿನ ಸಮಾಜವೇದಿಕೆ, ದೆಹಲಿಯ ಜನತಾಂತ್ರಿಕ ಸಮಾಜವಾದ ಸಂಘಟನೆ ಸಿದ್ಧಪಡಿಸಿದ ವರದಿಯನ್ನು ಹಿತ್ತಲಗಿಡ ಪ್ರಕಾಶನ ಪ್ರಕಟಿಸಿದೆ.

‘ಸಮಾಜಮುಖಿ ರಾಜಕೀಯ ಪಕ್ಷಗಳ ಸಾಂಸ್ಥಿಕ ರಚನೆ ಗಟ್ಟಿಯಿದ್ದರೂ ರಾಜಕೀಯ ಪ್ರಜ್ಞೆಯ ಕೊರತೆಯಿಂದಾಗಿ ಯಾವುದೇ ಅಲೆ ಎಬ್ಬಿಸುತ್ತಿಲ್ಲ. ತನ್ನ ರಾಜಕೀಯ ಪಕ್ಷದ ಗೆಲುವಿನಲ್ಲೇ ತನ್ನ ಅಳಿವು– ಉಳಿವು ಎಂದು ಸಂಘ ಪರಿವಾರವು ಕಾರ್ಯನಿರ್ವಹಿಸು
ವಂತೆ ಸಮಾಜಮುಖಿ ಪಕ್ಷಗಳ ಸಾಂಸ್ಥಿಕ ಸಂಘಟನೆಗಳು ವರ್ತಿಸುತ್ತಿಲ್ಲ’ ಎಂದು ವಿಷಾದಿಸಿದರು.

‘ಬಿಜೆಪಿಗೆ ಆರ್‌ಎಸ್‌ಎಸ್‌ ಎಂಬ ಗಟ್ಟಿ ಸಾಂಸ್ಥಿಕ ತಳಪಾಯವಿರುವುದರ ಬಗ್ಗೆ ವರದಿಯಲ್ಲಿ ಪರಾಮರ್ಶಿಸಲಾಗಿದೆ. ತಳಮಟ್ಟದವರೆಗೂ ಬೇರೂರಿರುವ ಪ್ರಗತಿಪರ ಸಂಘಟನೆಗಳು, ಸಂಘ– ಸಂಸ್ಥೆಗಳು ಹೊಸ ರಾಜಕೀಯ ಪ್ರಯೋ ಗಕ್ಕೆ ಈ ರೀತಿಯ ಸಾಂಸ್ಥಿಕ ರಚನೆಯನ್ನು ಒದಗಿಸಬಹುದು’ ಎಂದು ಅವರು ಹೇಳಿದರು.

‘ಆಮ್‌ ಆದ್ಮಿ ಪಕ್ಷವು ಅಲೆ ಎಬ್ಬಿಸುತ್ತಿದ್ದರೂ ಇತರ ಸಮಾನ ಪಕ್ಷಗಳೊಂದಿಗೆ ಕೈಜೋಡಿಸದೆ ಒಂಟಿಯಾಗಿರುವುದೇ ನಿರೀಕ್ಷಿತ ಫಲಿತಾಂಶ ನೀಡದಿರಲು ಕಾರಣ ಎಂಬುದನ್ನು ವರದಿ ಗುರುತಿಸಿದೆ’ ಎಂದರು.

ನಿಗೂಢ ಮತದಾರರು: ‘ವರದಿಯಲ್ಲಿ ಶೇ 23 ರಿಂದ ಶೇ 35ರಷ್ಟು ‘ನಿಗೂಢ ಮತದಾರರು’ ನಿರ್ಣಾಯಕವಾಗಿದ್ದಾರೆ ಎಂದು ತಿಳಿಸಲಾಗಿದೆ. ನಿಗೂಢತೆ ಹೆಚ್ಚಿದ್ದರೆ ನಮ್ಮ ಸುತ್ತ ದುಷ್ಟತೆ ಹೆಚ್ಚಿದೆ ಎಂದರ್ಥ. ಭೀತಿಯಿಂದ ಅಲ್ಪಸಂಖ್ಯಾತರು, ಇತರರ ಕೆಂಗಣ್ಣಿಗೆ ಗುರಿಯಾಗಿ ಮುದುಡಿದ ಮಹಿಳೆಯರು, ಹಿರಿಯ ನಾಗರಿಕರು ನಿಗೂಢರಾಗಿರಬಹುದು. ಕಲ್ಯಾಣ ಕರ್ನಾಟಕದಲ್ಲೂ ಹೀಗೇ ಇದೆ. ಈ ನಿಗೂಢತೆಯ ಅರ್ಥವು ಪರಿಸ್ಥಿತಿ, ಸನ್ನಿವೇಶಕ್ಕೆ ತಕ್ಕಂತೆ ಬದಲಾಗುತ್ತಿರುತ್ತದೆ’ ಎಂದರು.

‘ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಇದುವರೆಗೂ ಆಳ್ವಿಕೆ ಸಂಸಾರ ನಡೆಸಿವೆ. ಅವುಗಳನ್ನು ಬಿಟ್ಟು ಆಳ್ವಿಕೆ ಸಂಸಾರ ಮಾಡದಿರುವ ನವಪಕ್ಷಗಳ ಕಡೆಗೆ ಶೇ 46ರಷ್ಟು ಮತದಾರರು ಒಲವು ತೋರಿದ್ದಾರೆ’ ಎಂದರು.

ಸಮಾಜವಾದಿ ಧುರೀಣ ಕಲಬು ರಗಿಯ ಬಿ.ಆರ್‌. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ದೆಹಲಿ ಜಾಮಿಯಾ ಮಿಲಿಯಾ ವಿವಿಯ ಪ್ರೊ. ಡಿ.ಕೆ.ಗಿರಿ, ರಾಜಕೀಯ ವಿಮರ್ಶಕ ಸುಧೀಂದ್ರ ಕುಲಕರ್ಣಿ, ಅಧ್ಯಯನ ತಂಡದ ಮುಂದಾಳು ಪ್ರಕಾಶ ಕಮ್ಮರಡಿ ಮಾತನಾಡಿದರು.

ವಿಶ್ರಾಂತ ಕುಲಪತಿ ಡಾ. ಸಬಿಹಾ ಭೂಮಿಗೌಡ, ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ದಾವಣಗೆರೆಯ ಅನೀಸ್‌ ಪಾಷ, ಪ್ರೊ ಕಾಳೇಗೌಡ ನಾಗವಾರ, ಅರುಣ್‌ ಕುಮಾರ್‌ ಶ್ರೀವಾಸ್ತವ, ಸಿದ್ದನ ಗೌಡ ಪಾಟೀಲ, ಶ್ರೀಕಂಠ ಮೂರ್ತಿ ಇದ್ದರು.

‘ಮೊದಾನಿಯಿಂದ ಉಳಿಗಾಲವಿಲ್ಲ’

ಚುನಾವಣೆ ಹತ್ತಿರವಾಗುತ್ತಿರುವಂತೆ ರಾಜ್ಯದಲ್ಲಿ ಮೋದಿ, ಅಮಿತ್‌ ಶಾ ಹೆಚ್ಚು ಓಡಾಡುತ್ತಿದ್ದಾರೆ. ಹೀಗಾಗಿ ಇಲ್ಲಿ ಕಸಿಪದ ‘ಮೊದಾನಿ’ ಚಲಾವಣೆಯಲ್ಲಿದೆ. ಮೋದಿ, ಅದಾನಿ ಸೇರಿದ ಒಂದೇ ಪದ, ಒಂದೇ ಹೆಸರು ಇದು. ಅಧಿಕಾರ ಮತ್ತು ಕುರುಡು ಕಾಂಚಾಣ ಸೇರಿ ಒಂದೇ ಪದವಾಗಿದೆ, ಉಳಿಗಾಲವಿಲ್ಲ’ ಎಂದು ದೇವನೂರ ಮಹಾದೇವ ಮಾರ್ಮಿಕವಾಗಿ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT