ಬೆಂಗಳೂರು: ‘ಇವತ್ತಿನ ಸಭೆಯಲ್ಲಿ ಪಕ್ಷದ ನಾಯಕತ್ವದ ಬದಲಾವಣೆ ವಿಚಾರ ಬಂದಿಲ್ಲ. ಆ ಕುರಿತು ಯಾವುದೇ ಶಾಸಕರು ಪ್ರಸ್ತಾಪ ಮಾಡಲಿಲ್ಲ’ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ತಿಳಿಸಿದರು.
ಎಲ್ಲ ಶಾಸಕರ ಭೇಟಿಯ ಬಳಿಕ ಅವರು ಸಂಜೆ ಸುದ್ದಿಗಾರರ ಜತೆ ಮಾತನಾಡಿ ಈ ವಿಷಯ ತಿಳಿಸಿದರು.
‘ನಾಯಕತ್ವದ ವಿಚಾರ ನಮ್ಮ ಕಾರ್ಯಸೂಚಿಯಲ್ಲಿ ಇದ್ದರೆ ಅದಕ್ಕಾಗಿಯೇ ಪ್ರತ್ಯೇಕ ಸಭೆ ಕರೆಯುತ್ತೇವೆ. ಈಗ ಅಂತಹ ಪ್ರಮೇಯವಿಲ್ಲ. ನಾವು ಮೂರು ದಿನ ನಾಯಕತ್ವದ ಬಗ್ಗೆ ಚರ್ಚೆ ಮಾಡುತ್ತಿಲ್ಲ’ ಎಂದು ಅವರು ಪುನರುಚ್ಚರಿಸಿದರು.
‘ಒಂದಿಬ್ಬರು ಶಾಸಕರು ಪದೇ ಪದೇ ಮುಖ್ಯಮಂತ್ರಿ ಮತ್ತು ಅಧ್ಯಕ್ಷ ನಳಿನ್ ಅವರ ಬಗ್ಗೆ ಮಾತನಾಡುತ್ತಲೇ ಇದ್ದಾರೆ. ಅವರ ಹೇಳಿಕೆಗಳನ್ನು ಗಮನಿಸುತ್ತಾ ಬಂದಿದ್ದೇವೆ. ಅವರ ಬಗ್ಗೆ ಇನ್ನಷ್ಟು ಮಾಹಿತಿ ಸಂಗ್ರಹಿಸಲಾಗುವುದು. ಯಾವುದೇ ಶಾಸಕರ ಹೇಳಿಕೆ ಪಕ್ಷಕ್ಕೆ ಹಾನಿ ಮಾಡಬಾರದು. ಈ ಶಾಸಕರ ಹೇಳಿಕೆ ಪಕ್ಷಕ್ಕೆ ಹಾನಿ ಮಾಡುವ ಸ್ವರೂಪದ್ದು’ ಎಂದು ಅರುಣ್ ಸಿಂಗ್ ಹೇಳಿದರು.
‘ಪಕ್ಷಕ್ಕೆ ಹೊಸದಾಗಿ ಬಂದಿರುವ ಕೆಲವರಿಗೆ ಪಕ್ಷದ ಸಂಸ್ಕೃತಿ, ಕಾರ್ಯಕರ್ತರ ಪರಿಶ್ರಮದ ಬಗ್ಗೆ ಅರಿವಿಲ್ಲ. ಅವರು ಹೇಳಿಕೆ ನೀಡುವ ಮೊದಲು ಅದನ್ನು ಗಮನಿಸಬೇಕು. ನಮ್ಮ ಕಾರ್ಯಕರ್ತರು ತ್ಯಾಗ, ಬಲಿದಾನಗಳ ಮೂಲಕ ಪಕ್ಷವನ್ನು ಕೆಳ ಹಂತದಿಂದ ಕಟ್ಟಿದ್ದಾರೆ. ಈ ರೀತಿ ನೀತಿಗಳನ್ನು ತಿಳಿದುಕೊಳ್ಳಬೇಕು’ ಎಂದು ಅವರು ಎಚ್.ವಿಶ್ವನಾಥ್ ಅವರನ್ನು ಉದ್ದೇಶಿಸಿ ಹೇಳಿದರು.
ರಾಜ್ಯದಲ್ಲಿ ಸಚಿವರು ಮತ್ತು ಶಾಸಕರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವತ್ತು ಅವರಿಂದ ಪಡೆದ ಮಾಹಿತಿಗಳಿಂದ ಸಂತೃಪ್ತನಾಗಿದ್ದೇನೆ ಎಂದೂ ಅರುಣ್ಸಿಂಗ್ ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.