ಬೆಂಗಳೂರು: ಕಾಮೆಡ್– ಕೆ ಕೊನೆ ಕ್ಷಣದಲ್ಲಿ ಹೊಸ ಸುತ್ತೋಲೆ ಹೊರಡಿಸಿದ ಕಾರಣ ಸಾವಿರಾರು ವಿದ್ಯಾರ್ಥಿಗಳು ತಮ್ಮದಲ್ಲದ ತಪ್ಪಿಗೆ ಸೀಟು ವಂಚಿತರಾಗಿದ್ದಾರೆ ಎಂದು ದೂರಿರುವ ಪೋಷಕರು, ಈ ಬಗ್ಗೆ ಹಲವು ಕಾಮೆಡ್–ಕೆ ವಿದ್ಯಾರ್ಥಿಗಳ ಸಹಾಯವಾಣಿಗೆ ಇ– ಮೇಲ್ ಮೂಲಕ ದೂರು ನೀಡಿದ್ದಾರೆ.
ಡಿ. 27ರಂದು ಕಾಮೆಡ್– ಕೆ 3ನೇ ಸುತ್ತಿನ ಫಲಿತಾಂಶ ಪ್ರಕಟವಾಗಿತ್ತು. ಅದರ ಪ್ರಕಾರ ಡಿ. 28ರ 3.30ರ ಒಳಗೆ ವಿದ್ಯಾರ್ಥಿಗಳು ತಮಗೆ ಹಂಚಿಕೆಯಾದ ಸೀಟು ಖಚಿತಪಡಿಸಿಕೊಳ್ಳಬೇಕಿತ್ತು. ಇದು ಕೊನೆಯ ಸುತ್ತು ಆಗಿದ್ದರಿಂದ ವಿದ್ಯಾರ್ಥಿಗಳಿಗೆ ಎರಡು ಆಯ್ಕೆಗಳನ್ನು ನೀಡಲಾಗಿತ್ತು.
ಆಯ್ಕೆ 1ರ ಪ್ರಕಾರ ತಮಗೆ ಹಂಚಿಕೆಯಾದ ಸೀಟು ಖಚಿತಪಡಿಸಿಕೊಡು ಶುಲ್ಕ ಕಟ್ಟುವುದು. ಆಯ್ಕೆ 2ರ ಪ್ರಕಾರ ತಮಗೆ ಸಿಕ್ಕಿದ ಸೀಟು ನಿರಾಕರಿಸಿ ಆಯ್ಕೆ ಪ್ರಕ್ರಿಯೆಯಿಂದ ಹೊರಗೆ ಬರುವುದು. ಇದರ ಆಧಾರದ ಮೇಲೆ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡಿದ್ದಾರೆ.
ಆದರೆ, 28ರಂದು ಸಂಜೆ ಹೊಸ ಸುತ್ತೋಲೆಯೊಂದನ್ನು ಕಾಮೆಡ್–ಕೆ ಹೊರಡಿಸಿತ್ತು. ಅದರ ಪ್ರಕಾರ, ಆಯ್ಕೆ 1 ಆರಿಸಿದ ವಿದ್ಯಾರ್ಥಿಗಳನ್ನು ಮುಂದಿನ ‘ಎಕ್ಸ್ಕ್ಲ್ಯೂಸಿವ್ ರೌಂಡ್’ಗೆ ಪರಿಗಣಿಸಲಾಗಿದೆ. ಆದರೆ, ಈ ವಿಷಯ ತಿಳಿಯದ ಆಯ್ಕೆ 2 ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳು ಈ ಅವಕಾಶದಿಂದ ವಂಚಿತರಾಗಿದ್ದಾರೆ.
ಈ ಸುತ್ತೋಲೆಯನ್ನು ಈ ಸುತ್ತಿನ ಫಲಿತಾಂಶ ಬರುವ ಮೊದಲೇ ಪ್ರಕಟಿಸಬೇಕಿತ್ತು ಎಂದು ಪೋಷಕರು ದೂರಿನಲ್ಲಿ ಅಹವಾಲು ತೋಡಿಕೊಂಡಿದ್ದಾರೆ. ಅಲ್ಲದೆ, ನ್ಯಾಯ ದೊರಕಿಸಿಕೊಡಬೇಕು ಎಂದೂ ಮನವಿ ಮಾಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಮೆಡ್–ಕೆ ಅಧಿಕಾರಿಯೊಬ್ಬರು. ‘ಎಕ್ಸ್ಕ್ಲ್ಯೂಸಿವ್ ಸುತ್ತು ಕೊನೆ ಕ್ಷಣದಲ್ಲಿನಿರ್ಧರಿಸಲಾಗಿದೆ. ಅಲ್ಲದೆ, ಈ ಸುತ್ತು ಪ್ರಸಕ್ತ ವರ್ಷ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಮಾತ್ರ. ಇಲ್ಲದೇ ಇದ್ದರೆ ಅವರು ಒಂದು ವರ್ಷ ಕಾಯಬೇಕಾಗುತ್ತದೆ. ಇತರ ವಿದ್ಯಾರ್ಥಿಗಳಿಗೆ ಸೀಟು ಆಯ್ಕೆಗೆ ಈಗಾಗಲೇ ಸಾಕಷ್ಟು ಅವಕಾಶ ನೀಡಲಾಗಿದೆ’ ಎಂದರು. ‘ಕೌನ್ಸೆಲಿಂಗ್ಗೆ ಇನ್ನೂ 15 ದಿನಗಳ ಕಾಲಾವಕಾಶ ಕೇಳಿದ್ದೇವೆ. ಹೆಚ್ಚುವರಿ ಕಾಲಾವಕಾಶ ಸಿಕ್ಕಿದರೆ ಈ ಬಗ್ಗೆ ಪರಿಶೀಲಿಸಲಾಗುವುದು’ ಎಂದೂ ಹೇಳಿದರು.