ಶಿವಮೊಗ್ಗ: ‘ಹಿಂದೂ, ಮುಸ್ಲಿಮರ ಮಧ್ಯೆ ಸೌಹಾರ್ದ ಇರಬೇಕು ಎಂದು ಹಿರಿಯ ಶ್ರೀಗಳು ಮಠದಲ್ಲೇ ಇಫ್ತಿಯಾರ್ ಕೂಟ ಆಯೋಜಿಸಿದ್ದರು. ಆದರೆ, ಯಾವ ಮಸೀದಿಯಲ್ಲೂ ಮಠಾಧೀಶರನ್ನು ಕರೆದು ಸತ್ಕರಿಸಿಲ್ಲ. ಬದಲಾವಣೆ ಒಂದು ಬದಿಯಲ್ಲಿ ಸಾಧ್ಯವಿಲ್ಲ’ ಎಂದು ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿಸೋಮವಾರ ಪ್ರತಿಪಾದಿಸಿದರು.
ಅಯೋಧ್ಯೆಗೆ ತೆರಳುವ ಮುನ್ನ ಶಿವಮೊಗ್ಗದಲ್ಲಿ ಈಶ್ವರಪ್ಪ ಅವರ ಮನೆಗೆ ಭೇಟಿ ನೀಡಿದ್ದ ಅವರು, ‘ರಾಮ, ಹನುಮ ಹುಟ್ಟಿದ ನಾಡಿನಲ್ಲೇ ಅವರ ಜಯಂತಿ, ಉತ್ಸವಗಳ ಸಮಯದಲ್ಲಿ ಪ್ರತಿರೋಧ ತೋರುವುದು ಸರಿಯಲ್ಲ’ ಎಂದರು.
‘ಮುಸ್ಲಿಂ ಸಮುದಾಯದ ಬಗ್ಗೆ ನಾವು ಒಲವು ತೋರಿದರೆ, ಅವರು ಎಲ್ಲದಕ್ಕೂ ವಿರೋಧ ವ್ಯಕ್ತಪಡಿಸುತ್ತಾರೆ. ಎರಡೂ ಕಡೆ ಹೊಂದಾಣಿಕೆ ಇದ್ದರೆ ಸೌಹಾರ್ದ ಬೆಳೆಯುತ್ತದೆ. ಕಲ್ಲು ತೂರಾಟ ನಡೆಸುವುದು, ದೇವಸ್ಥಾನಗಳಿಗೆ ಹಾನಿ ಮಾಡುವುದು ತುಂಬಾ ನೋವಿನ ಸಂಗತಿ. ಪ್ರತಿರೋಧ ತೊರೆದು ಸಹಬಾಳ್ವೆಯಿಂದ ಜೀವನ ನಡೆಸಬೇಕು’ ಎಂದು ಕಿವಿಮಾತು ಹೇಳಿದರು.
ಶಾಸಕ ಕೆ.ಎಸ್.ಈಶ್ವರಪ್ಪ ಅವರು, ‘ಹನುಮ ಜಯಂತಿ, ರಾಮನವಮಿ ಸಮಯದಲ್ಲಿ ಆಘಾತಕಾರಿ ಕೃತ್ಯ ನಡೆಸಿದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಳಿ ಪ್ರಸ್ತಾಪಿಸುವೆ’ ಎಂದರು.