ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ವೃದ್ಧಿಗೆ ಮುಂದಿನ ಬಜೆಟ್‌ನಲ್ಲಿ ವಿಶೇಷ ಯೋಜನೆ: ಸಿಎಂ ಬಸವರಾಜ ಬೊಮ್ಮಾಯಿ

Last Updated 11 ಸೆಪ್ಟೆಂಬರ್ 2021, 6:50 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲಿ ಪರಿಸರ ವೃದ್ಧಿಗೆ ಮುಂದಿನ ಬಜೆಟ್‌ನಲ್ಲಿ ವಿಶೇಷ ಯೋಜನೆಯನ್ನು ರೂಪಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಅಂಗವಾಗಿ ಮಲ್ಲೇಶ್ವರದ ಅರಣ್ಯ ಭವನದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಇದೇ ಮೊದಲ ಬಾರಿಗೆ ಪರಿಸರ ನಷ್ಟ ತಪ್ಪಿಸಲು ಯೋಜನೆ ತರಲು ಉದ್ದೇಶಿಸಲಾಗಿದೆ. ಆ ಮೂಲಕ, ಪರಿಸರ ನಷ್ಟ ತಡೆಯಲು ಯತ್ನಿಸಲಾಗುವುದು’ ಎಂದರು.

‘ನಮ್ಮ ಹಿರಿಯರು ಅರಣ್ಯ ಸಂರಕ್ಷಣೆ ಮಾಡಿದ್ದರಿಂದ ಇಂದು ನಾವಿದ್ದೇವೆ. ಹಿರಿಯರಂತೆ ನಾವು ಕೂಡಾ ಮುಂದಿನ ಪೀಳಿಗೆಯವರಿಗೆ ಪರಿಸರ, ಅರಣ್ಯ ಸಂರಕ್ಷಣೆ ಮಾಡಬೇಕಿದೆ. ಇತ್ತೀಚೆಗೆ ಪರಿಸರ ನಷ್ಟ ಹೆಚ್ಚಾಗುತ್ತಿದೆ. ಮುಂದಿನ ಪೀಳಿಗೆಗಾಗಿ ಪರಿಸರ ನಷ್ಟ ತಪ್ಪಿಸಬೇಕಿದೆ. ಅದಕ್ಕೆ ಪರಿಸರದ ವಾರ್ಷಿಕ‌ ಅಧ್ಯಯನ ಅಗತ್ಯ. ಬಜೆಟ್‌ನಲ್ಲಿ ಪರಿಸರ ಕೊರತೆ ನೀಗಿಸುವ ಯೋಜನೆ‌ ತರಬೇಕಿದೆ’ ಎಂದರು.

‘ಕಾಡು ಉಳಿಸಲು ಸರ್ಕಾರ ಇನ್ನಷ್ಟು ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ. ಅತ್ಯಂತ ದಕ್ಷತೆಯಿಂದ ‌ಕಾಡು ಉಳಿಸುವ ಕಾರ್ಯ ಆಗಬೇಕು.ಕಾಡಿನ ಜೊತೆಗೆ ಪ್ರಾಣಿಗಳ ಬಲಿ ಕಡಿಮೆ ಆಗಬೇಕು. ನಾಡಿಗೆ ಬಂದಿರುವ ಕಾಡಿನ ಪ್ರಾಣಿಗಳನ್ನು ಮತ್ತೆ ಕಾಡಿಗೆ ಕಳುಹಿಸಬೇಕು. ಪ್ರಾಣಿಗಳಿಂದ ಮನುಷ್ಯರ ಪ್ರಾಣ ಉಳಿಸುವು‌ದು ಕೂಡ ಮುಖ್ಯ’ ಎಂದರು.

‘ಯಡಿಯೂರಪ್ಪ ಅವರ ಅವಧಿಯಲ್ಲಿ ಅರಣ್ಯ ಹುತಾತ್ಮರಾದವರಿಗೆ ₹ 30 ಲಕ್ಷ ಪರಿಹಾರ ಘೋಷಿಸಿದ್ದಾರೆ. ಅದಕ್ಕಿಂತಲೂ ಮೊದಲು ಪರಿಹಾರ ಮೊತ್ತ ಕಡಿಮೆ‌ ಇತ್ತು’ ಎಂದೂ ವರು ಹೇಳಿದರು.

ಕಾರ್ಯಕ್ರಮಕ್ಕೂ ಮೊದಲು, ಹುತಾತ್ಮ ಅರಣ್ಯ ಸಿಬ್ಬಂದಿಯ ಸ್ಮಾರಕಕ್ಕೆ ಮುಖ್ಯಮಂತ್ರಿ ಪುಷ್ಪ ನಮನ ಸಲ್ಲಿಸಿದರು.

ಅರಣ್ಯ ಸಚಿವ ಗೈರು: ಅರಣ್ಯ ಸಚಿವ ಉಮೇಶ್ ಕತ್ತಿ ಅವರ ಅನುಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು. ವಿಮಾನ ರದ್ದು ಆಗಿದ್ದರಿಂದ ಕಾರ್ಯಕ್ರಮಕ್ಕೆ ಬರಲು ಆಗಿಲ್ಲ ಎಂದು ಬೆಳಗಾವಿಯಲ್ಲಿರುವ ಕತ್ತಿ ಅವರು ಮುಖ್ಯಮಂತ್ರಿಗೆ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT