ಚಿತ್ರದುರ್ಗ: ಇಲ್ಲಿನ ಮುರುಘಾ ಮಠದ ಶಿವಮೂರ್ತಿ ಮುರುಘಾಶರಣರ ವಿರುದ್ಧದ ಎರಡನೇ ಪೋಕ್ಸೊ ಪ್ರಕರಣದ ಸಂಬಂಧ ಮಹಜರು ನಡೆಸಲುಸಂತ್ರಸ್ತ ಬಾಲಕಿಯರ ಜತೆಮಂಗಳವಾರ ಮಠಕ್ಕೆ ತೆರಳಿದ್ದ ತನಿಖಾ ತಂಡದವರು, ಕೊಠಡಿಗಳ ಬೀಗದ ಕೀ ಸಿಗದೇ ವಾಪಸಾಗಿದ್ದಾರೆ.
ತನಿಖಾಧಿಕಾರಿಗಳು ಮೈಸೂರಿನಿಂದ ಚಿತ್ರದುರ್ಗಕ್ಕೆ ಬಾಲಕಿಯರನ್ನು ಕರೆದುಕೊಂಡು ಬಂದಿದ್ದರು. ಮಠದಲ್ಲಿನ ಮುರುಘಾ ಶರಣರ ಕಚೇರಿ, ವಿಶ್ರಾಂತಿ ಕೊಠಡಿಗಳಿಗೆ ತೆರಳಿ ಮಹಜರು ನಡೆಸಲು ಸಿದ್ಧತೆ ನಡೆಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ, ಕೊಠಡಿಗಳಿಗೆ ಹಾಕಲಾಗಿದ್ದ ಬೀಗದ ಕೀ ಸಿಗದ ಕಾರಣ ಸಂತ್ರಸ್ತೆಯರನ್ನು ನ್ಯಾಯಾಲಯಕ್ಕೆ ಕರೆದೊಯ್ಯಲಾಯಿತು.ಬಾಲಕಿಯರು ಹಾಗೂ ದೂರು ನೀಡಿರುವ ಅವರ ತಾಯಿಯನ್ನುಜಿಲ್ಲಾ ನ್ಯಾಯಾಧೀಶರ ಎದುರು ಹಾಜರುಪಡಿಸಿ ಹೇಳಿಕೆ ದಾಖಲಿಸಿಕೊಳ್ಳಲಾಯಿತು.
28ಕ್ಕೆ ವಿಚಾರಣೆ: ಪ್ರಕರಣದ 6ನೇ ಆರೋಪಿ ಮಹಾಲಿಂಗ ಹಾಗೂ 7ನೇ ಆರೋಪಿ ಅಡುಗೆ ಮಾಡುವ ಕರಿಬಸಪ್ಪ ಅವರ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು ಕೋರ್ಟ್ ಅ.28ಕ್ಕೆ ಮುಂದೂಡಿದೆ. ತಕರಾರು ಅರ್ಜಿ ಸಲ್ಲಿಸಲು ಸಂತ್ರಸ್ತರ ಪರ ವಕೀಲರಿಗೆ ಸೂಚಿಸಿದೆ.
15 ದಿನ ಕಾಲಾವಕಾಶಕ್ಕೆ ಅರ್ಜಿ: ಶಿವಮೂರ್ತಿ ಮುರುಘಾ ಶರಣರ ವಿರುದ್ಧ ದಾಖಲಾದ ಮೊದಲನೇ ಪೋಕ್ಸೊ ಪ್ರಕರಣದ ಆರೋಪಪಟ್ಟಿ ಸಲ್ಲಿಕೆಗೆ ನ.15ರವರೆಗೆ ಕಾಲಾವಕಾಶ ಕೋರಿ ತನಿಖಾ ತಂಡ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ.
ತನಿಖೆ ಪೂರ್ಣಗೊಳ್ಳದ ಕಾರಣ ಚಾರ್ಜ್ಶೀಟ್ ಸಲ್ಲಿಸಲಾಗುತ್ತಿಲ್ಲ ಎಂದು ತನಿಖಾಧಿಕಾರಿ ಅನಿಲ್ಕುಮಾರ್ ತಿಳಿಸಿದರು.