ಬೆಂಗಳೂರು: ವಿವಿಧ ಕ್ಷೇತ್ರಗಳಲ್ಲಿ ತಮ್ಮ ಪಾಡಿಗೆ ತಾವು ಕೆಲಸ ಮಾಡುತ್ತಾ, ಸದ್ದಿಲ್ಲದೇ ಸಾಧನೆ ಮಾಡಿರುವವರನ್ನು ಗುರುತಿಸಿ ‘ಪ್ರಜಾವಾಣಿ’ ಪತ್ರಿಕಾ ಬಳಗವು ನೀಡುವ ‘ಪ್ರಜಾವಾಣಿ ಸಾಧಕರು–2022’ ಪ್ರಶಸ್ತಿ ಪ್ರದಾನ ಸಮಾರಂಭ ಜೂನ್ 23ರಂದು ಸಂಜೆ 4 ಗಂಟೆಗೆ ನಗರದ ಕೆ.ಜಿ. ರಸ್ತೆಯ ಮೈಸೂರು ಬ್ಯಾಂಕ್ ವೃತ್ತದ ಬಳಿಯ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ (ಎಫ್ಕೆಸಿಸಿಐ) ಸರ್ ಎಂ.ವಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ (ಕೆ.ಎಸ್.ಡಿ.ಎಲ್) ಪ್ರಾಯೋಜಕತ್ವ ಹಾಗೂ ಎಫ್ಕೆಸಿಸಿಐ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಅತಿಥಿಗಳಾಗಿಚನ್ನಗಿರಿ ಶಾಸಕ ಹಾಗೂ ಕೆಎಸ್ ಅಂಡ್ ಡಿಎಲ್ನ ಅಧ್ಯಕ್ಷರಾದ ಕೆ. ಮಾಡಾಳ್ ವಿರೂಪಾಕ್ಷಪ್ಪ, ಚಲನಚಿತ್ರ ನಟ ನಾಗಭೂಷಣ್, ಕೆಎಸ್ ಅಂಡ್ ಡಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ. ಮಹೇಶ್ ಎಂ. ಮತ್ತು ಎಫ್ಕೆಸಿಸಿಐ ಅಧ್ಯಕ್ಷರಾದ ಡಾ. ಐ.ಎಸ್. ಪ್ರಸಾದ್ಪಾಲ್ಗೊಳ್ಳಲಿದ್ದಾರೆ.
ಸಮಾಜ ಸೇವೆ, ಕೃಷಿ, ಕ್ರೀಡೆ, ವೈದ್ಯಕೀಯ, ಶಿಕ್ಷಣ, ವಿಜ್ಞಾನ, ಉದ್ಯಮ... ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ರಾಮನಗರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ಒಟ್ಟು 22 ಜನರಿಗೆ ‘ಪ್ರಜಾವಾಣಿ ಸಾಧಕರು–2022’ ಪ್ರಶಸ್ತಿ ಪ್ರದಾನ ನಡೆಯಲಿದೆ.