ಶಿರಸಿ: ‘ಹಿಂದೂ ಪದ ಅಶ್ಲೀಲ, ಹೊಲಸು ಎಂದು ಜರಿದಿರುವ ಸತೀಶ ಜಾರಕಿಹೊಳಿ ಹಿಂದೂ ಧರ್ಮೀಯರ ಕ್ಷಮೆ ಕೇಳಬೇಕು’ ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ್ ಆಗ್ರಹಿಸಿದ್ದಾರೆ.
ನಗರದಲ್ಲಿ ಸೋಮವಾರ ಮಾಧ್ಯಮದವರ ಜತೆ ಮಾತನಾಡಿದ ಅವರು, ‘ಸ್ಮಶಾನದಲ್ಲಿ ಪೂಜೆ, ಮದುವೆ ಮಾಡುವ ಸತೀಶ್ ಒಬ್ಬ ನಾಸ್ತಿಕವಾದಿ. ಅವರಿಗೆ ಹಿಂದೂ, ಹಿಂದುತ್ವದ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ. ಅವರ ಹೇಳಿಕೆ ಕಾಂಗ್ರೆಸ್ಸಿನವರ ಹಿಂದೂ ವಿರೋಧಿ ಭಾವನೆಯನ್ನು ಬಹಿರಂಗಪಡಿಸಿದೆ’ ಎಂದು ಆರೋಪಿಸಿದರು.
‘ಹಿಂದೂ ಎಂಬುದು ಯಾವುದೇ ಪಂಥ ಅಥವಾ ಜಾತಿಯ ಸೂಚಕವಲ್ಲ. ಅದೊಂದು ಜೀವನ ಪದ್ಧತಿ. ಸುಪ್ರಿಂಕೋರ್ಟ್ ಕೂಡ ಇದನ್ನು ಸ್ಪಷ್ಟಪಡಿಸಿದೆ. ಹಿಂದೂ ಶಬ್ದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಇವನ್ನೆಲ್ಲ ಸತೀಶ್ ತಿಳಿದುಕೊಳ್ಳಬೇಕು’ ಎಂದರು.
ಕಾಂಗ್ರೆಸ್ ಹಿಂದೂ ವಿರೋಧಿ: ಬಿಜೆಪಿ
ಬೆಂಗಳೂರು: ಕಾಂಗ್ರೆಸ್ ಹಿಂದೂ ವಿರೋಧಿ ಪಕ್ಷ ಎಂಬುದಕ್ಕೆ ಸತೀಶ ಜಾರಕಿಹೊಳಿ ಅವರ ಹೇಳಿಕೆಯೇ ಸಾಕ್ಷಿ ಎಂದು ಬಿಜೆಪಿ ಟ್ವೀಟ್ ಮಾಡಿದೆ.
‘ಹಿಂದೂ ಧರ್ಮದ ವಿರುದ್ಧ ಮಾತನಾಡುವ ಮೂಲಕ ಮತಬ್ಯಾಂಕ್ ಗಟ್ಟಿಗೊಳಿಸುವ ಹುನ್ನಾರ ನಡೆಸುತ್ತಿದೆ ಯೇ’ ಎಂದು ಪ್ರಶ್ನಿಸಿರುವ ಬಿಜೆಪಿ, ‘ಸತೀಶ ಜಾರಕಿಹೊಳಿ ಅವರ ಹೇಳಿಕೆ ಕಾಂಗ್ರೆಸ್ ಪಕ್ಷದ ಹೇಳಿಕೆಯೇ’ ಎಂದು ಡಿ.ಕೆ.ಶಿವಕುಮಾರ್ ಅವರನ್ನು ಪ್ರಶ್ನಿಸಿದೆ.