ಗದಗ: ‘ಆರ್ಯ ಈಡಿಗ ಸಮಾಜದ ನೇತೃತ್ವದಲ್ಲಿ ನಡೆಯುತ್ತಿರುವ ಸಿಂಗದೂರು ಚೌಡೇಶ್ವರಿ ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ಸೇರಿಸಬೇಕು ಎಂಬ ಪ್ರಯತ್ನ ನಡೆಯುತ್ತಿದೆ. ಸರ್ಕಾರದ ಈ ನಡೆಯನ್ನು ಸಮಾಜ ಸಹಿಸುವುದಿಲ್ಲ’ ಎಂದು ಪ್ರಣವಾನಂದರಾಮ ಸ್ವಾಮೀಜಿ ಎಚ್ಚರಿಕೆ ನೀಡಿದರು.
ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಿಗಂದೂರು ಚೌಡೇಶ್ವರಿ ಆಶೀರ್ವಾದದಿಂದ ಆ ದೇವಸ್ಥಾನವನ್ನು ನಡೆಸುವ ಶಕ್ತಿ ಸಮಾಜಕ್ಕೆ ಇದೆ. ಧರ್ಮದರ್ಶಿ ರಾಮಪ್ಪ ಅಜ್ಜನವರು ದೇವಸ್ಥಾನವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ‘ ಎಂದು ಹೇಳಿದರು.
‘ಯಾರದ್ದೋ ಕುಮ್ಮಕ್ಕಿನಿಂದ ಆ ದೇವಸ್ಥಾನಕ್ಕೆ ತೊಂದರೆ ನೀಡಿದ್ದೇ ಆದಲ್ಲಿ ಸಮಾಜ ಸಹಿಸುವುದಿಲ್ಲ. ಯಾವುದೇ ಕಾರಣಕ್ಕೂ ಆ ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ಬಿಟ್ಟುಕೊಡುವುದಿಲ್ಲ’ ಎಂದೂ ಅವರು ಗುಡುಗಿದರು.