ಬೆಂಗಳೂರು: ‘ಮೂಲ ವಿಜ್ಞಾನ ಬೋಧನೆಯ ಶೈಲಿ ಬದಲಾಗಬೇಕಿದೆ. ಹಾಗೆಯೇ, ಮಕ್ಕಳಿಗೆ ಮೂಲ ವಿಜ್ಞಾನ ಕಲಿಯಲು ಹೆಚ್ಚೆಚ್ಚು ಪ್ರೋತ್ಸಾಹ ನೀಡಬೇಕಿದೆ‘ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ಇಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಜ್ಞಾನಿಗಳನ್ನು ಗೌರವಿಸಿ ಮಾತನಾಡಿದರು.
‘ಹತ್ತು ವರ್ಷಗಳಲ್ಲಿ 150 ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ. ಹತ್ತು ವರ್ಷಗಳಲ್ಲಿ ಎಲ್ಲ ಗುಣಮಟ್ಟದ ಕಾಲೇಜುಗಳು ವಿವಿಗಳಾಗಬೇಕು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ.
ಮುಂದಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರದ ಸುಧಾರಣೆಗಳ ಪರ್ವವೇ ಆರಂಭವಾಗಲಿದೆ’ ಎಂದರು.
ಹಿರಿಯ ಬಾಹ್ಯಾಕಾಶ ವಿಜ್ಞಾನಿ ಡಾ.ಕೆ.ಕಸ್ತೂರಿರಂಗನ್ ಅವರು, ‘ಕೇಂದ್ರವು ರಾಷ್ಟ್ರೀಯ ಶಿಕ್ಷಣ ನೀತಿ ಪ್ರಕಟಿಸುವ ಮುನ್ನವೇ ಕರ್ನಾಟಕವು ಸರ್ವ ಸಿದ್ಧತೆಗಳನ್ನು ಮಾಡಿಕೊಂಡು ಕಾರ್ಯಪಡೆ ರಚಿಸಿತ್ತು‘ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ತರಬೇತಿ ಸಂಸ್ಥೆಯನ್ನು ಅಶ್ವತ್ಥನಾರಾಯಣ ಉದ್ಘಾಟಿಸಿದರು.
ಪ್ರಶಸ್ತಿ ಪುರಸ್ಕೃತ ವಿಜ್ಞಾನಿಗಳು (ಜೀವಮಾನ ಸಾಧನೆ ಪ್ರಶಸ್ತಿ):ಪ್ರೊ.ಸಿ.ಎನ್.ಆರ್.ರಾವ್, ಡಾ.ಕೆ.ಕಸ್ತೂರಿ ರಂಗನ್, ಡಾ.ರೋಹಿಣಿ ಗೋಡ್ಬೋಲೆ, ಡಾ.ಎಂ.ಮಹಾದೇವಪ್ಪ, ಪ್ರೊ.ಸಿ.ಕಾಮೇಶ್ವರ ರಾವ್.
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಜೀವಮಾನ ಸಾಧನೆ ಪ್ರಶಸ್ತಿ (ವಿಜ್ಞಾನ- ಕನ್ನಡದಲ್ಲಿ ಬರವಣಿಗೆ): ನಾಗೇಶ್ ಹೆಗಡೆ, ಡಾ.ಸಿ.ಆರ್.ಚಂದ್ರಶೇಖರ್.
ಅಕಾಡೆಮಿ ಗೌರವ ಫೆಲೋಷಿಪ್: ಡಾ.ಕೆ.ವಿ. ಪ್ರಭು, ಡಾ.ಎನ್.ಕೆ.ನಂದಕುಮಾರ್, ಡಾ.ಟಿ.ಶಿವಾನಂದಪ್ಪ, ಡಾ.ರಾಮಕೃಷ್ಣ, ಪ್ರೊ.ಬಿ.ವೆಂಕಟೇಶ್, ಪ್ರೊ.ಎಸ್.ಆರ್.ನಿರಂಜನ, ಪ್ರೊ. ಕೆ.ಎಸ್.ರಂಗಪ್ಪ, ಡಾ.ಎನ್.ಆರ್.ಶೆಟ್ಟಿ, ಪ್ರೊ.ಎನ್.ಎಂ.ಬುಜುರ್ಕೆ, ಡಾ.ಸಿ.ಎನ್.ಮಂಜುನಾಥ್, ಪ್ರೊ.ಎಂ.ಐ.ಸವದತ್ತಿ.
ಪ್ರೊ.ಕೆ.ಸಿದ್ದಪ್ಪ, ಡಾ.ಎಚ್.ಹೊನ್ನೇಗೌಡ, ಪ್ರೊ.ಆರ್.ಎಸ್.ದೇಶಪಾಂಡೆ, ಡಾ.ಮೃತ್ಯುಂಜಯ, ಡಾ.ಸಿ.ಎನ್.ರವಿಶಂಕರ್, ಡಾ.ರಾಘವೇಂದ್ರ ಭಟ್ಟ, ಡಾ.ಗೋವಿಂದ ಆರ್.ಕಡಂಬಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.