ಬೆಂಗಳೂರು: ‘ಪತ್ರಕರ್ತರ ನಿವೃತ್ತಿ ವೇತನ ಯೋಜನೆ ಪುನರ್ ಜಾರಿಗೆ ಶೀಘ್ರವೇ ಆದೇಶ ಹೊರಡಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಪ್ರೆಸ್ಕ್ಲಬ್ ಬಿಸಿನೆಸ್ ಐಕಾನ್ ಅವಾರ್ಡ್–2022 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಪತ್ರಕರ್ತರಿಗೆ ನಿವೃತ್ತ ವೇತನ ನೀಡುವ ಸಂಬಂಧ ಸದ್ಯ ಸಮಿತಿ ಇಲ್ಲ. ಕೂಡಲೇ ಸಮಿತಿಯೊಂದನ್ನು ರಚನೆ ಮಾಡಲು ಆದೇಶಿಸುತ್ತೇನೆ’ ಎಂದರು.
‘ನಿವೃತ್ತಿ ವೇತನ ಮಂಜೂರು ಮಾಡಲು ಇರುವ ಷರತ್ತುಗಳನ್ನು ಸಡಿಲಗೊಳಿಸಲಾಗುವುದು. ಅಲ್ಲದೇ, ನಿವೃತ್ತಿ ವೇತನ ಮೊತ್ತ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದರು.
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅಧ್ಯಕ್ಷತೆ ವಹಿಸಿದ್ದರು.
ನಟಿ ರಮ್ಯಾ ಮಾತನಾಡಿ, ‘ಬೇರೆ ಬೇರೆ ಕ್ಷೇತ್ರಗಳ ಸಾಧಕರನ್ನೂ ಗುರುತಿಸಿ ಪ್ರಶಸ್ತಿ ನೀಡಬೇಕು. ಸಿನಿಮಾ ಕ್ಷೇತ್ರದ ಸಾಧಕರಿಗೂ ಪ್ರಶಸ್ತಿ ನೀಡುವ ಕಾರ್ಯಕ್ರಮ ಆಯೋಜಿಸುವುದು ಸೂಕ್ತ’ ಎಂದು ಸಲಹೆ ನೀಡಿದರು.
ಪ್ರೆಸ್ಕ್ಲಬ್ ಅಧ್ಯಕ್ಷ ಆರ್. ಶ್ರೀಧರ್, ‘ಮುಂದಿನ ದಿನಗಳಲ್ಲಿ ಸಿನಿಮಾ ಮತ್ತು ಕ್ರೀಡಾ ಕ್ಷೇತ್ರದ ಸಾಧಕರಿಗೂ ಪ್ರಶಸ್ತಿ ನೀಡುವ ಬಗ್ಗೆ ತೀರ್ಮಾನಿಸಲಾಗಿದೆ’ ಎಂದು ತಿಳಿಸಿದರು.