ಬೆಂಗಳೂರು: ‘ದೇಶದಲ್ಲಿ ಖಾಸಗೀಕರಣ ಮತ್ತು ಗುತ್ತಿಗೆ ಪದ್ಧತಿ ಹೆಚ್ಚಾಗುತ್ತಿದೆ. ಇದರಿಂದಾಗಿ ದಲಿತರು ಹೋರಾಟ ಮಾಡುತ್ತಿರುವ ಮೀಸಲಾತಿಯೇ ಮುಂದೊಂದು ದಿನ ಮರೆಯಾಗಲಿದೆ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಕಳವಳ ವ್ಯಕ್ತಪಡಿಸಿದರು.
ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಆರ್ಪಿಐ) ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ (ಭೀಮವಾದ) ಭಾನುವಾರ ಆಯೋಜಿಸಿದ್ದ ಪದಾಧಿಕಾರಿಗಳ ರಾಜ್ಯಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿದರು.
‘ಬಂಡವಾಳಶಾಹಿ ಪ್ರಭುತ್ವಇಂದು ದೇಶವನ್ನು ಆಳುತ್ತಿದೆ.ಆರ್ಥಿಕ ಖಾಸಗೀಕರಣದ ಅಪಾಯಗಳ ಬಗ್ಗೆ ದಲಿತ ಚಳವಳಿಗಳು ಜಾಗೃತಗೊಳ್ಳಬೇಕು.ದಲಿತ ಪ್ರಜ್ಞೆ ಸಾಮಾಜಿಕ, ಆರ್ಥಿಕ ಪ್ರಭುತ್ವಗಳ ಅನಿಷ್ಠಗಳು ಹಾಗೂಧಾರ್ಮಿಕ ಮೂಲಭೂತವಾದವನ್ನೂಏಕಕಾಲಕ್ಕೆ ವಿರೋಧಿಸಬೇಕು’ ಎಂದರು.
ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ,‘ಬೇರೆ ಜಾತಿಯವರ ಹೋರಾಟ ಒಂದು ಹಂತ ತಲುಪಿದೆ. ಆದರೆ, ದಲಿತರ ಹೋರಾಟ ಆರಂಭಗೊಂಡು ನಾಲ್ಕು ದಶಕಗಳು ಕಳೆದರೂ ಮೊದಲ ಸ್ಥಿತಿಯಲ್ಲೇ ಇದೆ. ಲಕ್ಷಾಂತರ ಹಳ್ಳಿಗಳಲ್ಲಿ ಜಾತಿ ಅಸಮಾನತೆ ಜೀವಂತವಾಗಿದೆ’ ಎಂದರು.
‘ಹಿಜಾಬ್ ವಿಚಾರ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತದೆ. ಆದರೆ, ದಲಿತರ ಮೇಲಾಗುವ ದೌರ್ಜನ್ಯಗಳು ಹೆಚ್ಚು ಮಹತ್ವ ಪಡೆದುಕೊಳ್ಳುವುದಿಲ್ಲ.ದಲಿತರ ಮೇಲೆ ದೌರ್ಜನ್ಯವಾದರೆ ಅದರ ಪರಿಣಾಮ ಹೀಗೂ ಇರುತ್ತದೆ ಎಂದು ದೌರ್ಜನ್ಯ ಮಾಡುವವರಿಗೆ ಅರಿವಾಗಬೇಕು. ಆ ರೀತಿಯ ವಾತಾವರಣ ಸೃಷ್ಟಿಸಲು ದಲಿತರೆಲ್ಲ ಸಜ್ಜಾಗಬೇಕು’ ಎಂದರು.