ಬೆಂಗಳೂರು: ‘ರೈತರು ಕರೆ ನೀಡಿರುವ ಭಾರತ್ ಬಂದ್ ಯಶಸ್ವಿಗೊಳಿಸುವಂತೆ ಜಿಲ್ಲೆ, ತಾಲ್ಲೂಕು, ಬ್ಲಾಕ್ ಮಟ್ಟದ ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಗೆ ಸೂಚಿಸಿದ್ದೇನೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ‘ವಿಧಾನಸೌಧದ ಆವರಣದಲ್ಲಿಯೂ ಪ್ರತಿಭಟನೆ ನಡೆ ಸುತ್ತೇವೆ. ಎಲ್ಲಿಯೂ ಅಹಿತಕರ ಘಟನೆಗೆ ಅವಕಾಶ ನೀಡದಂತೆ ಸೂಚಿಸಲಾಗಿದೆ’ ಎಂದರು.
‘ಗೋಹತ್ಯೆ ನಿಷೇಧ ಕಾಯ್ದೆ ಸೇರಿದಂತೆ ಹಲವು ಮಸೂದೆಗಳನ್ನು ಮಂಡಿಸಲು ರಾಜ್ಯ ಸರ್ಕಾರ ಹೊರಟಿದೆ. ಗೋ ಹತ್ಯೆ ನಿಷೇಧ ಕಾಯ್ದೆ ವಿರುದ್ಧದ ಹೋರಾಟಕ್ಕೆ ರೂಪುರೇಷೆ ಸಿದ್ಧಪಡಿಸುತ್ತಿದ್ದೇವೆ’ ಎಂದು ವಿವರಿಸಿದರು.
ರೈತರಿಂದ ಸಹಿ ಸಂಗ್ರಹ: ‘ರಾಜ್ಯದಲ್ಲಿ 2.8 ಕೋಟಿ ರೈತರಿಂದ ಸಹಿ ಸಂಗ್ರಹಿಸಿದ್ದೇವೆ. ಇದನ್ನು ಎಐಸಿಸಿ ವರಿಷ್ಠರಿಗೆ ಕಳುಹಿಸಿ ಕೊಡುತ್ತೇವೆ. ಇದನ್ನು ಅವರು ರಾಷ್ಟ್ರಪತಿಗೆ ತಲುಪಿಸುವರು ಎಂದರು.