ಬೆಂಗಳೂರು: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿಯಾಗಿದ್ದ ಅಮ್ರಿತ್ ಪೌಲ್ ಅವರ ವಸತಿ ಸಮುಚ್ಚಯ ಹಾಗೂ ಫಾರ್ಮ್ ಹೌಸ್ ಮೇಲೆ ಬುಧವಾರ ಸಿಐಡಿ ತಂಡವು ದಾಳಿ ನಡೆಸಿ ಶೋಧಿಸಿತು.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ಫಾರ್ಮ್ ಹೌಸ್ನಲ್ಲಿ ಬೆಳಿಗ್ಗೆ ಒಂದು ತಂಡವು ಶೋಧ ನಡೆಸಿದರೆ, ಮತ್ತೊಂದು ತಂಡವು ಬೆಂಗಳೂರಿನ ಸಹಕಾರ ನಗರದ ವಸತಿ ಸಮುಚ್ಚಯದಲ್ಲಿ ತಪಾಸಣೆ ನಡೆಸಿತು.
ವಸತಿ ಸಮುಚ್ಚಯದಲ್ಲಿ ಮಹತ್ವದ ದಾಖಲೆಗಳು, ನೇಮಕಾತಿ ಸಂಬಂಧ ಸರ್ಟಿಫಿಕೇಟ್ಗಳು ತನಿಖಾ ತಂಡಕ್ಕೆ ಸಿಕ್ಕಿದೆ. ಫಾರ್ಮ್ ಹೌಸ್ನಲ್ಲಿ ಕಡಿಮೆ ಮೊತ್ತದ ನಗದು ದೊರೆತಿದ್ದು, ಅವುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮತ್ತೊಬ್ಬ ಆರೋಪಿ ಜಾಗೃತ್ ಮನೆಯಲ್ಲೂ ಶೋಧ ಕಾರ್ಯ ನಡೆಸಲಾಗಿದೆ. ಅಲ್ಲಿಯೂ ಮೊಬೈಲ್ ಹಾಗೂ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.
ಅಮ್ರಿತ್ ಪೌಲ್ ಅವರನ್ನು ಸೋಮವಾರ ಬಂಧಿಸಿ ವಶಕ್ಕೆ ಪಡೆದಿದ್ದ ಸಿಐಡಿ ತಂಡವು ತನ್ನ ಕಚೇರಿಯಲ್ಲಿ ಮೂರನೇ ದಿನವಾದ ಬುಧವಾರ ಸಹ ತೀವ್ರ ವಿಚಾರಣೆಗೆ ಒಳಪಡಿಸಿತು. ಇತರೆ ಬಂಧಿತ ಆರೋಪಿಗಳು ನೀಡಿದ್ದ ಹೇಳಿಕೆ ಆಧರಿಸಿ ಪ್ರಶ್ನೆ ಹಾಕಲಾಗಿದೆ. ಕಮಿಷನ್ ವಿಚಾರ, ಹಣ ವರ್ಗಾವಣೆಯ ಬಗ್ಗೆ ಮಾಹಿತಿ ಕಲೆಹಾಕಿದೆ.
ಈ ಮಧ್ಯೆ 1ನೇ ಎಸಿಎಂಎಂ ನ್ಯಾಯಾಲಯವು ಅಮ್ರಿತ್ ಪೌಲ್ಗೆ ಮನೆಯ ಊಟ ನೀಡಲು ಅದೇಶಿಸಿದೆ.
ಪೌಲ್ ಅವರಿಗೆ ಆರೋಗ್ಯ ಸರಿಯಿಲ್ಲ. ಮನೆಯ ಊಟ ನೀಡಲು ಅವಕಾಶ ನೀಡುವಂತೆ ಅವರ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಮನವಿ ಪುರಸ್ಕರಿಸಿದ ನ್ಯಾಯಾಲಯವು ಬೆಳಿಗ್ಗೆಯ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿಯ ಮನೆ ನೀಡಲು ಅವಕಾಶ ನೀಡಿದೆ.
ಪೌಲ್ ವಿಚಾರಣೆ ವೇಳೆ ‘ಪ್ರಭಾವಿ’ಗಳ ಹೆಸರು ಬಹಿರಂಗ ಪಡಿಸಿದ್ದು, ಅವರಿಗೆ ನೋಟಿಸ್ ನೀಡಲು ಸಿದ್ಧತೆ ನಡೆಸಲಾಗುತ್ತಿದೆ ಎಂದೂ ಮೂಲಗಳು ಹೇಳಿವೆ.