ಬೆಂಗಳೂರು: ‘ಒಬ್ಬ ಸಜ್ಜನ ಯುವಕನನ್ನು ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಎರಡನೇ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದೇವೆ. ಆತ್ಮಸಾಕ್ಷಿಯ ಅನುಸಾರ ಮತ ಚಲಾಯಿಸುವಂತೆ ಎಲ್ಲ ಶಾಸಕರಿಗೂ ಮನವಿ ಮಾಡುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಕ್ಷದ ನಾಯಕರು ಮತ್ತು ದೆಹಲಿಯ ವರಿಷ್ಠರು ಕೈಗೊಳ್ಳುವ ನಿರ್ಧಾರವನ್ನು ಪಾಲಿಸುವುದು ನಮ್ಮ ಕರ್ತವ್ಯ. ಆ ಪ್ರಕಾರವೇ ಮನ್ಸೂರ್ ಅಲಿ ಖಾನ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದೇವೆ. ಆತ್ಮಸಾಕ್ಷಿಯ ಪ್ರಕಾರ ಅವರಿಗೆ ಮತ ನೀಡುವಂತೆ ಶಾಸಕರನ್ನು ಕೋರುತ್ತೇವೆ’ ಎಂದು ಹೇಳಿದರು.
‘ಎರಡನೇ ಅಭ್ಯರ್ಥಿ ಗೆಲುವಿಗೆ ಮತಗಳ ಕೊರತೆ ಇದೆ. ಆದರೆ, ನಮ್ಮದೂ ಕೆಲವು ಲೆಕ್ಕಾಚಾರ ಇದೆ. ಹಿಂದಿನ ಚುನಾವಣೆಯಲ್ಲಿ ನಾವು ಗೌರವದ ಕಾರಣಕ್ಕಾಗಿ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ. ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡುವಂತೆ ಅವರು ಕೇಳಿದ್ದಾರೆ. ನಾವು ಈ ಬಾರಿ ಬೆಂಬಲ ಕೇಳುವ ವಿಚಾರದಲ್ಲಿ ಏನನ್ನೂ ಹೇಳುವುದಿಲ್ಲ’ ಎಂದರು.
ಪ್ರಜಾಪ್ರಭುತ್ವದ ಮೇಲೆ ಕಾಂಗ್ರೆಸ್ ಪಕ್ಷಕ್ಕೆ ನಂಬಿಕೆ ಇದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ನ ಎರಡನೇ ಅಭ್ಯರ್ಥಿ ಗೆಲುವು ಸಾಧಿಸುತ್ತಾರೆ ಎಂಬ ವಿಶ್ವಾಸ ತಮಗಿದೆ ಎಂದು ಹೇಳಿದರು.
‘ರಾಜ್ಯಕ್ಕೆ ಜೈರಾಂ ರಮೇಶ್ ಕೊಡುಗೆ ಏನು’ ಎಂದು ಕಾಂಗ್ರೆಸ್ನ ಕೆಲವು ಮುಖಂಡರು ಪ್ರಶ್ನಿಸುತ್ತಿರುವ ಕುರಿತು ಕೇಳಿದಾಗ, ‘ರಾಜ್ಯದವರಾದ ಅವರು ಪಕ್ಷದ ಮೂಲಕ ರಾಷ್ಟ್ರಕ್ಕೆ ಹಲವು ಕೊಡುಗೆ ನೀಡಿದ್ದಾರೆ. ಅವು ನಿಮ್ಮ ಕಣ್ಣಿಗೆ ಕಾಣದೇ ಇರಬಹುದು. ನಮಗೆ ಕಾಣಿಸುತ್ತವೆ’ ಎಂದು ಉತ್ತರಿಸಿದರು.
ಜೂನ್ 2 ಮತ್ತು 3ರಂದು ರಾಜ್ಯ ಮಟ್ಟದ ಕಾಂಗ್ರೆಸ್ ಚಿಂತನ ಶಿಬಿರ ನಡೆಯಲಿದೆ. 500ಕ್ಕೂ ಹೆಚ್ಚು ಮಂದಿಗೆ ಸಭೆಗೆ ಆಹ್ವಾನ ನೀಡಲಾಗಿದೆ. ಪಕ್ಷದ ಮುಂದಿರುವ ಸವಾಲುಗಳು, ದೇಶ ಎದುರಿಸುತ್ತಿರುವ ಸಮಸ್ಯೆಗಳು, ಸಂಘಟನೆ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಯಲಿದೆ ಎಂದು ಶಿವಕುಮಾರ್ ತಿಳಿಸಿದರು.