ಬೆಂಗಳೂರು: ರಾಜಕೀಯ ಟೀಕೆಗಾಗಿ ಸಿದ್ದರಾಮಯ್ಯ ಅವರ ಪುತ್ರ, ದಿವಂಗತ ರಾಕೇಶ್ ಅವರ ವಿಚಾರಗಳನ್ನು ಎಳೆದು ತಂದ ಬಿಜೆಪಿಗೆ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.
‘ಹಿಂದುತ್ವ ಮತ್ತು ಹಿಂದು ಧರ್ಮದ ನಡುವಿನ ವ್ಯತ್ಯಾಸ ಇಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ’ ಎಂದು ಅವರು ಟೀಕಿಸಿದ್ದಾರೆ.
‘ಎರಡು ವರ್ಷಗಳ ಆಡಳಿತದ ನಂತರವೂ ಬಿಜೆಪಿಗೆ ಹೇಳಿಕೊಳ್ಳಲು ಏನೂ ಉಳಿದಿಲ್ಲ. ಸತ್ತವರ ಕುರಿತು ಪೀತಪತ್ರಿಕೋದ್ಯಮವು ಪ್ರಕಟಿಸುವ ಅತಿರಂಜಕ ಸುದ್ದಿಗಳನ್ನು ಬಿಜೆಪಿ ಆಶ್ರಯಿಸಿದೆ. ಬಿಜೆಪಿ ಇನ್ನೆಷ್ಟು ಕೆಳಮಟ್ಟಕ್ಕೆ ಇಳಿಯಲಿದೆ? ನಳಿನ್ ಕುಮಾರ್ ಕಟೀಲ್ ಅವರೇ ನೀವಿದನ್ನು ಒಪ್ಪುವಿರಾ? ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಬಿಜೆಪಿ ಈ ಮಾತುಗಳ ಮೂಲಕ ‘ಹಿಂದೂ ಧರ್ಮ ಮತ್ತು ಹಿಂದುತ್ವ ನಡುವಿನ ವ್ಯತ್ಯಾಸ ಸ್ಪಷ್ಟವಾಗಿದೆ,‘ ಎಂದು ಹೇಳಿದ್ದಾರೆ.
‘ದಿವಂಗತ ಎಸ್.ಆರ್ ಬೊಮ್ಮಾಯಿ ಅವರು ಉತ್ತಮ ಆಡಳಿತ ನೀಡಿದ್ದರು ಎಂಬ ಕಾರಣಕ್ಕೆ ಅವರ ಪುತ್ರ ಬಸವರಾಜ ಬೊಮ್ಮಾಯಿ ಅವರಿಂದಲೂ ಅದನ್ನೇ ನಿರೀಕ್ಷಿಸಲಾಗದು’ ಎಂದು ಸಿದ್ದರಾಮಯ್ಯ ಅವರು ಹೇಳಿದ್ದರು. ಸಿದ್ದರಾಮಯ್ಯ ಅವರ ಈ ಹೇಳಿಕೆಗೆ ತಿರುಗೇಟು ನೀಡಲು ಹೋಗಿದ್ದ ಬಿಜೆಪಿಯು, ಸಿದ್ದರಾಮಯ್ಯ ಅವರ ಪುತ್ರ ರಾಕೇಶ್ ಅವರ ವಿಚಾರವನ್ನು ಎಳೆದು ತಂದಿತ್ತು.
‘ಸಿದ್ದರಾಮಯ್ಯನವರೇ, ನಿಮ್ಮ ಹಿರಿಯ ಪುತ್ರ ರಾಕೇಶ್ ವಿಪರೀತ ಕುಡಿಯುವ ಅಭ್ಯಾಸ ಹೊಂದಿದ್ದರೆಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಕುಡಿದ ಮತ್ತಿನಲ್ಲಿ ಹಿರಿಯರ ಮೇಲೂ ದೌರ್ಜನ್ಯ ಎಸಗಿದ ಬಗ್ಗೆ ಸುದ್ದಿಯಾಗಿತ್ತು. ಇದೆಲ್ಲ ಅಪ್ಪನ ಗುಣ ಎಂದು ಸಾಮಾನ್ಯೀಕರಿಸಲು ಸಾಧ್ಯವೇ?‘ ಎಂದು ಬಿಜೆಪಿ ಟ್ವೀಟ್ ಮಾಡಿತ್ತು. ಇದಕ್ಕೆ #ಮಜವಾದಿಸಿದ್ದರಾಮಯ್ಯ ಎಂಬ ಹ್ಯಾಷ್ಟ್ಯಾಗನ್ನೂ ಸೇರಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.