ಬೆಂಗಳೂರು: ‘ಹಿರಿಯ ಸಂಶೋಧಕ ಮತ್ತು ಕಾದಂಬರಿಕಾರ ಕೆ.ರಮಾನಂದ ಅವರು ರಚಿಸಿರುವ ಚಾರಿತ್ರಿಕ ವ್ಯಕ್ತಿಚಿತ್ರ ಶ್ರೀಕೃಷ್ಣದೇವರಾಯ ಕೃತಿಯು ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ನೆನಪಿಸುವಂತಿದೆ’ ಎಂದು ಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ ಜೀರಿಗೆ ಲೋಕೇಶ್ ಹೇಳಿದರು.
ಗಾಂಧಿ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.
‘ವಿಜಯನಗರ ಸಾಮ್ರಾಜ್ಯದ ಕೀರ್ತಿಶಿಖರವಾಗಿದ್ದ ಶ್ರೀಕೃಷ್ಣದೇವರಾಯನ ಕುರಿತು ಆಳವಾದ ಅಧ್ಯಯನ ನಡೆಸಿ ಈ ಕೃತಿ ರಚಿಸಲಾಗಿದೆ. ಶ್ರೀಕೃಷ್ಣದೇವರಾಯ ಕಲೆ, ಸಂಸ್ಕೃತಿ ಹಾಗೂ ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆಗಳ ಕುರಿತು ಇದರಲ್ಲಿ ಉಲ್ಲೇಖಿಸಲಾಗಿದೆ’ ಎಂದರು.
ಸಂಸ್ಕೃತಿ ಚಿಂತಕ ಗುರುರಾಜ ಪೋಶೆಟ್ಟಿಹಳ್ಳಿ ‘ರಮಾನಂದ ಅವರು ಐತಿಹಾಸಿಕ ರಾಜಮನೆತನದ ನಾಯಕನೊಬ್ಬನ ಬಗ್ಗೆ ಮನಮುಟ್ಟುವ ರೀತಿಯಲ್ಲಿ ಬರೆದಿದ್ದಾರೆ. ಇದು ಅವರ ಗದ್ಯ ಬರವಣಿಗೆಯ ನಿಪುಣತೆಗೆ ಹಿಡಿದ ಕೈಗನ್ನಡಿ’ ಎಂದು ತಿಳಿಸಿದರು.