ಬೆಂಗಳೂರು: ಹೊಸ ನರ್ಸಿಂಗ್ ಕಾಲೇಜುಗಳಿಗೆ ಸರ್ಕಾರ ಅನುಮತಿ ನೀಡಿರುವ ಕುರಿತು ವಿಧಾನ ಪರಿಷತ್ತಿನಲ್ಲಿ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಗುರುವಾರ ಸಿ.ಡಿ. ವಿಚಾರವೂ ಪ್ರತಿಧ್ವನಿಸಿತು.
ನರ್ಸಿಂಗ್ ಕಾಲೇಜುಗಳಿಗೆ ಅನುಮತಿ ನೀಡಿರುವುದರ ಹಿಂದೆ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ್ದ ಆಡಳಿತ ಪಕ್ಷದ ಸದಸ್ಯ ಎನ್.ರವಿಕುಮಾರ್ ಈ ಬಗ್ಗೆ ತನಿಖೆಗೆ ಒತ್ತಾಯಿಸಿದ್ದರು. ರವಿ ಕುಮಾರ್ ಹೆಸರನ್ನು ಉಲ್ಲೇಖಿಸಿದ ಜೆಡಿಎಸ್ನ ಮರಿತಿಬ್ಬೇಗೌಡ, ‘ಅವರ ಪರಿಸ್ಥಿತಿ ಸಿ.ಡಿ.ಯಂತಾಗಿದೆ’ ಎಂದು ಛೇಡಿಸಿದರು.
ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿಯ ತೇಜಸ್ವಿನಿ ಗೌಡ, ‘ಸಿ.ಡಿ. ವಿಚಾರ ಪದೇ ಪದೇ ಪ್ರಸ್ತಾಪಿಸಿದರೆ ನಮಗೆ ಹಿಂಸೆಯಾಗುತ್ತದೆ. ಮಹಿಳೆಯರು ಈ ಸದನದಲ್ಲಿ ಕುಳಿತುಕೊಳ್ಳ ಬೇಕೇ ಬೇಡವೇ’ ಎಂದು ಖಾರವಾಗಿ ಪ್ರಶ್ನಿಸಿದರು.
‘ಹಾಗಾದರೆ ದಿನವೂ ಸಿ.ಡಿ ಸುದ್ದಿ ನೋಡಬೇಕಾಗ ಸ್ಥಿತಿ ಎದುರಿಸುತ್ತಿರುವ ಜನರ ಪಾಡೇನು’ ಎಂದು ವಿರೋಧ ಪಕ್ಷದ ಮುಖ್ಯ ಸಚೇತಕ ಎಂ.ನಾರಾಯಣಸ್ವಾಮಿ ಚುಚ್ಚಿದರು.
ಕಾಂಗ್ರೆಸ್ನ ಬಿ.ಕೆ.ಹರಿಪ್ರಸಾದ್, ‘ಸದನದಲ್ಲಿ ಸಿ.ಡಿ ವಿಚಾರಪದೇ ಪದೇ ಪ್ರಸ್ತಾಪವಾದಾಗ ಇಲ್ಲಿರುವ 10 ಮಹಿಳೆಯರಿಗೇ ಇಷ್ಟೊಂದು ಮುಜುಗರವಾಗುತ್ತದೆ. ಹಾಗಾದರೆ ರಾಜ್ಯದ ಮಹಿಳೆಯರ ಪರಿಸ್ಥಿತಿ ಹೇಗೆ’ ಎಂದು ಪ್ರಶ್ನಿಸಿದರು.