ಬೆಳ್ತಂಗಡಿ: ಬಾಲಕಿಯನ್ನು ಅತ್ಯಾಚಾರ ಮಾಡಿರುವ ಶಂಕೆಯಿಂದ ವ್ಯಕ್ತಿಯೊಬ್ಬರ ಮೇಲೆ ಗುಂಪೊಂದು ಹಲ್ಲೆ ಮಾಡಿದ್ದು, ಅದನ್ನು ತಡೆಯಲು ಬಂದ ಸಂಬಂಧಿಕನ ಮೇಲೂ ಹಲ್ಲೆ ಮಾಡಲಾಗಿದೆ. ಹಲ್ಲೆ ತಪ್ಪಿಸಲು ಹೋಗಿ ಏಟು ತಿಂದ ಸಂಬಂಧಿಕ ವ್ಯಕ್ತಿ ಮೃತಪಟ್ಟ ಘಟನೆ ತಾಲ್ಲೂಕಿನ ಇಂದಬೆಟ್ಟು ಗ್ರಾಮದ ಪರಾರಿ ಶಾಂತಿನಗರ ಬಳಿ ಶುಕ್ರವಾರ ನಡೆದಿದೆ.
ಪರಾರಿ ಶಾಂತಿನಗರದಲ್ಲಿ ನಾರಾಯಣ ನಾಯ್ಕ್ (47) ಎಂಬುವರು ಬೀಡಿ ಕೊಟ್ಟು ವಾಪಸ್ ಬರುವಾಗ ಶಾಂತಿನಗರ ಆಟದ ಮೈದಾನದಲ್ಲಿ ಯುವಕರ ಗುಂಪು ಅಡ್ಡಹಾಕಿ, 'ನೀನು ನಾಲ್ಕು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದೀಯಾ' ಎಂದು ಆರೋಪಿಸಿ ಹಲ್ಲೆ ನಡೆಸಿದೆ. ಅದನ್ನು ನೋಡಿದ ನಾರಾಯಣ ನಾಯ್ಕ್ ಅವರ ಹೆಂಡತಿಯ ಅಕ್ಕನ ಗಂಡ ಜಾರಪ್ಪ ನಾಯ್ಕ್ (55) ಹಲ್ಲೆಯನ್ನು ತಪ್ಪಿಸಲು ತೆರಳಿದ್ದು, ಅವರಿಗೂ ಗುಂಪಿನಲ್ಲಿದ್ದವರು ಹಲ್ಲೆ ಮಾಡಿದ್ದರು.. ಈ ವೇಳೆ ಗಂಭೀರ ಗಾಯಗೊಂಡಿದ್ದ ಜಾರಪ್ಪ ನಾಯ್ಕ್ ಮತ್ತು ನಾರಾಯಣ ನಾಯ್ಕ್ ಇಬ್ಬರು ಅಸ್ವಸ್ಥರಾಗಿ ಬಿದ್ದಿದ್ದರು. ಈ ಬಗ್ಗೆ ಸ್ಥಳೀಯರು ಮನೆಯವರಿಗೆ ಮಾಹಿತಿ ತಿಳಿಸಿದಾಗ ಜಾರಪ್ಪ ಅವರ ಪುತ್ರ ರಾಜಶೇಖರ್ ಬಂದು ವಾಹನದಲ್ಲಿ ಉಜಿರೆ ಖಾಸಗಿ ಆಸ್ಪತ್ರೆಗೆ ಕರೆತರುತ್ತಿದ್ದಾಗ ದಾರಿ ಮಧ್ಯೆ ಜಾರಪ್ಪ ನಾಯ್ಕ್ ಕೊನೆಯುಸಿರೆಳೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಾರಾಯಣ ನಾಯ್ಕ್ ಅವರನ್ನು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಬ್ಬರ ಮೇಲೆ ಹಲ್ಲೆ ಮಾಡಿದವರು ಸ್ಥಳೀಯ ನಿವಾಸಿಗಳಾದ ಮನೋಹರ್, ಚಂದ್ರಕಾಂತ್ ನಾಯ್ಕ್, ದೀಪಕ್ ರೈ, ಹರಿಪ್ರಸಾದ್, ವಿಜಯ್, ವೈಶಾಲಿ ಮತ್ತಿತರರು ಎಂದು ದೂರಿನಲ್ಲಿ ಆರೋಪಿಸಲಾಗಿದೆ
ಮೃತ ಜಾರಪ್ಪ ನಾಯ್ಕ್ ಅವರ ಪುತ್ರ ರಾಜಶೇಖರ್ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.