ಕೆಂಗೇರಿ: ’ಮನೋಬಲವೇ ಮದ್ದು, ಮನೋಸ್ಥೈರ್ಯ ಕುಸಿದರೆ ಸ್ವಸ್ಥ ಶರೀರ ಕೂಡಾ ಕುಸಿದು ಬೀಳುತ್ತದೆ‘ ಎಂದು ಆರ್ಟ್ ಆಫ್ ಲಿವಿಂಗ್ನ ಶ್ರೀ ಶ್ರೀ ರವಿಶಂಕರ್ ಗುರೂಜಿ ಹೇಳಿದರು.
ಯಶವಂತಪುರ ಕ್ಷೇತ್ರದ ಕಗ್ಗಲೀಪುರ ಹಾಗೂ ಅಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟ ಕುಟುಂಬಗಳಿಗೆ ಸಚಿವ ಎಸ್.ಟಿ. ಸೋಮಶೇಖರ್ ನೀಡುತ್ತಿರುವ ತಲಾ ₹ 1 ಲಕ್ಷ ಸಹಾಯಧನ ವಿತರಿಸಿ ಅವರು ಮಾತನಾಡಿದರು.
ನೈಸರ್ಗಿಕ ವಿಕೋಪಗಳಿಗೆ ಸರ್ಕಾರವನ್ನು ಹೊಣೆಯಾಗಿಸುವುದು ಸರಿಯಲ್ಲ. ಅತಿವೃಷ್ಟಿ ಅನಾವೃಷ್ಟಿ ಎಲ್ಲವೂ ಸಹಜ. ಸಮಸ್ಯೆ ಪರಿಹಾರಕ್ಕೆ ಎಲ್ಲರು ಕೈ ಜೋಡಿಸಬೇಕುಎಂದರು.
ಎಸ್.ಟಿ.ಸೋಮಶೇಖರ್ ಮಾತನಾಡಿ, ’ಕ್ಷೇತ್ರದಲ್ಲಿ 5 ಟ್ರಯಾಜ್ ಸೆಂಟರ್ ಹಾಗೂ 3 ಕೋವಿಡ್ ಕೇರ್ ಸೆಂಟರ್ ವ್ಯವಸ್ಥೆ ಮಾಡಲಾಗಿದೆ. ಸೋಂಕಿನ ಲಕ್ಷಣ ಕಂಡು ಬಂದರೆ ತಕ್ಷಣವೇ ಹತ್ತಿರದ ಟ್ರಯಾಜ್ ಕೇಂದ್ರಕ್ಕೆ ಭೇಟಿ ನೀಡಿ ಔಷಧಿ ಪಡೆದುಕೊಳ್ಳಬೇಕು‘ ಎಂದು ತಿಳಿಸಿದರು.
ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿ ಶಿವಣ್ಣ, ಜಿಲ್ಲಾ ಪಂಚಾಯಿತಿ ಸದಸ್ಯೆ ರಶ್ಮಿ ಹನುಮಂತೇಗೌಡ, ಅಗರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭಾಸ್ಕರ್ ಇದ್ದರು.