ಬೆಂಗಳೂರು: ಪ್ರವಾದಿ ಮಹಮ್ಮದರ ಕುರಿತ ಅವಹೇಳನಕಾರಿ ಹೇಳಿಕೆಗೆ ದೇಶದಾದ್ಯಂತ ಮುಸ್ಲಿಂ ಸಮುದಾಯದಿಂದ ಆಕ್ರೋಶ ವ್ಯಕ್ತವಾಗಿರುವುದರಿಂದ ಮುಂಜಾಗ್ರತೆಯಾಗಿ ರಾಜ್ಯದಲ್ಲೂ ಕಟ್ಟೆಚ್ಚರ ವಹಿಸಲಾಗಿದೆ.
ಉತ್ತರ ಪ್ರದೇಶ, ಜಾರ್ಖಂಡ್ ನಲ್ಲಿ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಶುಕ್ರವಾರ ಘರ್ಷಣೆ ನಡೆದಿದೆ. ಇಂಥ ಘಟನೆ ಗಳು ರಾಜ್ಯದಲ್ಲಿ ನಡೆಯದಂತೆ ಎಚ್ಚರಿಕೆ ವಹಿಸಲು ಪೊಲೀಸರು, ತಮ್ಮ ವ್ಯಾಪ್ತಿಯಲ್ಲಿ ಭದ್ರತೆ ಬಿಗಿ
ಗೊಳಿಸಿದ್ದಾರೆ.
ಮಸೀದಿ, ಮಂದಿರ ಹಾಗೂ ಚರ್ಚ್ಗಳ ಸುತ್ತಮುತ್ತ ಪೊಲೀಸರು ಭದ್ರತೆ ವಹಿಸಲಾಗಿದೆ. ಬೆಂಗಳೂರು, ಮೈಸೂರು, ಕಲಬುರಗಿ, ಇತರೆ ಜಿಲ್ಲೆಗಳ ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಪ್ರದೇಶಗಳ ಮೇಲೆ ಪೊಲೀಸರು ನಿಗಾ ವಹಿಸಿದ್ದರು.
‘ಪ್ರತಿ ಠಾಣೆ ವ್ಯಾಪ್ತಿಯ ಸೂಕ್ಷ್ಮ, ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ. ಅಗತ್ಯವಿರುವೆಡೆ ಹೆಚ್ಚಿನ ಸಿಬ್ಬಂದಿ ನಿಯೋಜಿಸಲು, ಗಸ್ತು ಹೆಚ್ಚಿಸಲು ಹೇಳಲಾಗಿದೆ’ ಎಂದೂ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಸಭೆ: ಬೆಂಗಳೂರು ಕಮಿಷನರ್ ಪ್ರತಾಪ್ ರೆಡ್ಡಿ ಅವರು ಮುಸ್ಲಿಂ ಮುಖಂಡರ ಜೊತೆ ಶನಿವಾರ ಸಭೆ ನಡೆಸಿದರು. ಶ್ರೀರಾಮಪುರ ಹಾಗೂ ಇತರೆ ಠಾಣೆಗಳಲ್ಲೂ ಸಭೆ ಜರುಗಿದವು. ‘ಅನುಮತಿ ಇಲ್ಲದೇ ನಗರದಲ್ಲಿ ಯಾವುದೇ ಪ್ರತಿಭಟನೆ ನಡೆಸಲು ಅವಕಾಶವಿಲ್ಲ. ಶಾಂತಿಯಿಂದ ವರ್ತಿಸುವಂತೆ ಮುಖಂಡರು ತಮ್ಮ ಸಮುದಾಯದ ಜನರಿಗೆ ತಿಳಿವಳಿಕೆ ಹೇಳಬೇಕು’ ಎಂದು ಪ್ರತಾಪ್ ರೆಡ್ಡಿ ಸಭೆಯಲ್ಲಿ ಕೋರಿದರು.
ಶ್ರೀರಾಮಪುರ ಠಾಣೆ ಸಭೆಯಲ್ಲಿ ಮಾತನಾಡಿದ ಮುಸ್ಲಿಂ ಮುಖಂಡ ಸೈಯದ್ ತಬ್ರೇಜ್, ‘ರಾಜಕೀಯ ಷಡ್ಯಂತ್ರದಿಂದ ಕೂಡಿದ ಪ್ರತಿಭಟನೆಗೆ ನಮ್ಮ ಬೆಂಬಲವಿಲ್ಲ’ ಎಂದರು.
ದಾವಣಗೆರೆಯಲ್ಲಿ ನಿಷೇಧಾಜ್ಞೆ ಜಾರಿ
ದಾವಣಗೆರೆ: ಪ್ರವಾದಿ ಮಹಮ್ಮದರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪ ಸಂಬಂಧ ದೇಶದಾದ್ಯಂತ ಮುಸ್ಲಿಂ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿರುವ ಕಾರಣ ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜೂನ್ 11ರ ಸಂಜೆ 6ರಿಂದ 12ರ ರಾತ್ರಿ 10 ಗಂಟೆವರೆಗೂ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಆದೇಶ ಹೊರಡಿಸಿದ್ದಾರೆ. ‘ಎಸ್ಡಿಪಿಐ ಸಂಘಟನೆ ಭಾನುವಾರ ನಗರದಲ್ಲಿ ಹಮ್ಮಿಕೊಂಡಿದ್ದ ಜನಾಧಿಕಾರ ಸಮಾವೇಶವನ್ನು ನಿಷೇಧಾಜ್ಞೆ ಜಾರಿಗೊಳಿಸಿರುವುದರಿಂದ ಮುಂದೂಡುವಂತೆ ಸಮುದಾಯದ ಮುಖಂಡರಿಗೆ ಮನವಿ ಮಾಡಲಾಗಿದೆ. ನಗರದಲ್ಲಿ ಬಂದೋಬಸ್ತ್ ಮಾಡಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.