ಹುಬ್ಬಳ್ಳಿ: ಯಾವುದೇ ಒಣ ಪ್ರತಿಷ್ಠೆಗೆ ಒಳಗಾಗದೆ ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದು ರೈತರ ಭಾವನೆಗಳಿಗೆ ಬೆಲೆ ನೀಡಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ಐತಿಹಾಸಿಕ ತೀರ್ಮಾನ. ಅವರಿಗೆ ಅಭಿನಂದನೆಗಳು ಎಂದು ಶಾಸಕ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಕಾರಣದಿಂದ ಕೇಂದ್ರ ಈ ನಿರ್ಧಾರ ಕೈಗೊಂಡಿಲ್ಲ. ಕಾಯ್ದೆಯಲ್ಲಿ ಲೋಪ ದೋಷಗಳು ಇರಲಿಲ್ಲ. ಆದರೆ ರೈತರ ಹೋರಾಟ ಹಾಗೂ ಅವರ ಭಾವನೆಗೆ ಬೆಲೆ ನೀಡಿದೆ. ನಿರ್ಧಾರ ತೆಗೆದುಕೊಳ್ಳಲು ತಡವಾದರೂ ರೈತರಿಗೆ ಬೆಲೆ ನೀಡಿದೆ ಎಂದರು.
ರಾಜ್ಯದಲ್ಲಿ ನಿರಂತರ ಮಳೆಯಿಂದಾಗಿ ರೈತರ ಬದುಕು ಬೀದಿಗೆ ಬಂದಿದೆ. ಜೋಳ ಹಾಗೂ ಭತ್ತ ಬೆಳೆ ಹೆಚ್ಚು ನಾಶ ಆಗಿದೆ. ಅವರಿಗೆ ತುರ್ತಾಗಿ ಪರಿಹಾರ ಒದಗಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡಲಿದೆ. ಸರ್ಕಾರ ಯಾವಾಗಲೂ ರೈತರ ಪರ ಇರಲಿದೆ ಎಂದರು.
ರೈತರ ಹಿತದೃಷ್ಟಿಯಿಂದ ಕೇಂದ್ರ ಈ ನಿರ್ಧಾರ ತೆಗೆದುಕೊಂಡಿದೆ. ಹೋರಾಟದ ವೇಳೆ ಆದ ರೈತರ ಸಾವಿಗೂ, ಇದಕ್ಕೂ ಸಂಬಂಧವಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರಿಗೆ ನೆಮ್ಮದಿ ನೀಡುವ ಕೆಲಸ ಮಾಡುತ್ತವೆ. ಮಳೆಯಿಂದಾಗಿ ಬೆಂಗಳೂರು ನಗರದ ಜನರ ಬದುಕಿನ ಮೇಲೂ ವ್ಯಾಪಕ ಪರಿಣಾಮ ಬೀರಿದೆ. ಅಲ್ಲಿಯೂ ಸರ್ಕಾರ ಜನರ ನೆರವಿಗೆ ನಿಲ್ಲಲಿದೆ ಎಂದರು.
ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಕನಿಷ್ಠ 18ರಲ್ಲಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಈ ಚುನಾವಣೆ ಬಳಿಕವೂ ಪಕ್ಷ ಸಂಘಟನೆಗೆ ಕೆಲಸ ಮಾಡುವೆ. ಪ್ರತಿ ಜಿಲ್ಲೆಯಲ್ಲಿ ಒಂದು ವಾರ ವಾಸ್ತವ್ಯ ಮಾಡಿ ಪಕ್ಷ ಸಂಘಟನೆಗೆ ಒತ್ತು ಕೊಡುತ್ತೇನೆ. ನನ್ನ ಓಟಕ್ಕೆ ಯಾರೂ ಲಗಾಮು ಹಾಕಿಲ್ಲ. ಅಧಿಕಾರ ಇಲ್ಲದಿದ್ದರೂ ಜನಸೇವೆ ಮಾಡುತ್ತೇನೆ ಎಂದರು.
ಪ್ರಭುಗಳ ಮಾತಿಗೆ ಬೆಲೆ ಸಿಕ್ಕಿದೆ; ಕಾರಜೋಳ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಭುಗಳ ಮಾತೇ ಅಂತಿಮ. ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಭುಗಳ ಮಾತಿಗೆ ಬೆಲೆ ನೀಡಿದ್ದಾರೆ. ರೈತರ ಹಿತದೃಷ್ಟಿಯಿಂದ ಕಾಯ್ದೆಗಳನ್ನು ಕೇಂದ್ರ ವಾಪಸ್ ಪಡೆದಿದೆ. ರೈತರ ಭಾವನೆಗಳಿಗೆ ಬೆಲೆ ನೀಡಿದೆ ಎಂದು ಸಚಿವ ಗೋವಿಂದ ಕಾರಜೋಳ ಪ್ರತಿಕ್ರಿಯಿಸಿದರು.
Koo Appಕೃಷಿ ಕಾಯ್ದೆ ವಿರುದ್ಧ ದೇಶದ ಹಲವು ಭಾಗದ ರೈತರ ವಿರೋಧಕ್ಕೆ ಸ್ಪಂದಿಸಿ ಕಾಯ್ದೆಗಳನ್ನು ಹಿಂಪಡೆದ ಪ್ರಧಾನಿ ಶ್ರೀ @narendramodi ಅವರಿಗೆ ರೈತರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಸದಾ ರೈತರ ಹಿತ, ರೈತ ಪರವಾದ ಬದ್ಧತೆ ಹೊಂದಿರುವ ಕೇಂದ್ರ ಸರ್ಕಾರ, ಪ್ರತಿಷ್ಠೆ, ರಾಜಕೀಯಗಳನ್ನೆಲ್ಲಾ ಪರಿಗಣಿಸದೆ ಸಂವೇದನಾಶೀಲತೆಯನ್ನು ಪ್ರದರ್ಶಿಸಿದೆ.- BS Yediyurappa (@bsybjp) 19 Nov 2021
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.