ಬೆಂಗಳೂರು: ‘ಕರ್ನಾಟಕ ಸಫಾಯಿ ಕರ್ಮಚಾರಿಗಳ ಆಯೋಗ ಮತ್ತು ಅಭಿವೃದ್ಧಿ ನಿಗಮಗಳಿಗೆ ಅಧ್ಯಕ್ಷ ಸ್ಥಾನಗಳನ್ನು ಅರುಂಧತಿಯಾರ್ ಸಮುದಾಯದ ಮುಖಂಡರಿಗೆ ನೀಡಬೇಕು’ ಎಂದು ಅಖಿಲ ಕರ್ನಾಟಕ ಅರುಂಧತಿಯಾರ್ ಮಹಾಸಭಾದ ಅಧ್ಯಕ್ಷ ಆರ್.ಕೃಷ್ಣ ಆಗ್ರಹಿಸಿದ್ದಾರೆ.
‘ಪೌರಕಾರ್ಮಿಕ ಮತ್ತು ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ಜ್ಞಾನ ಹೊಂದಿರುವವರು ಹಾಗೂ ಅವರ ಸಹವರ್ತಿಗಳಿಗೆ ಆಯೋಗ ಮತ್ತು ನಿಗಮದ ಅಧ್ಯಕ್ಷ ಸ್ಥಾನ ನೀಡಬೇಕೆಂಬ ನಿಯಮ ಇದೆ. ಆದರೆ, ಸಫಾಯಿ ಕರ್ಮಚಾರಿಗಳ ಬಗ್ಗೆ ಜ್ಞಾನ ಇಲ್ಲದವರನ್ನು ಅಧ್ಯಕ್ಷರನ್ನಾಗಿ ಮಾಡಿ, ನಿಯಮಗಳನ್ನು ಗಾಳಿಗೆ ತೂರಲಾಗಿದೆ’ ಎಂದು ದೂರಿದ್ದಾರೆ.
‘ಅಧ್ಯಕ್ಷರನ್ನುಸರ್ಕಾರಕಾನೂನುಬಾಹಿರವಾಗಿ ನೇಮಿಸಿದೆ. ಕೂಡಲೇ ನೇಮಕ ಆದೇಶ ರದ್ದುಪಡಿಸಬೇಕು. ಆ ಸ್ಥಾನಗಳಿಗೆ ಅರ್ಹರಾಗಿರುವ ಅರುಂಧತಿಯಾರ್ ಸಮುದಾಯದವರನ್ನು ನೇಮಿಸಬೇಕು. ಈ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಮುದಾಯಕ್ಕೆ ರಾಜಕೀಯ ಶಕ್ತಿ ನೀಡಿ ಗೌರವಿಸಬೇಕು’ ಎಂದು ಒತ್ತಾಯಿಸಿದ್ದಾರೆ.