ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಕಾರಿ ಸಂಘಗಳ ಸ್ಥಿತಿಗತಿ ಬಗ್ಗೆ ಸಮೀಕ್ಷೆ: ಜಿ.ಟಿ.ದೇವೇಗೌಡ

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಜಿ.ಟಿ.ದೇವೇಗೌಡ ಹೇಳಿಕೆ
Last Updated 6 ಏಪ್ರಿಲ್ 2021, 14:17 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲಿರುವ ಸಹಕಾರಿ ಸಂಘಗಳ ಸ್ಥಿತಿಗತಿ ಬಗ್ಗೆ ಶೀಘ್ರವೇ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು’ ಎಂದು ಶಾಸಕ ಜಿ.ಟಿ.ದೇವೇಗೌಡ ಮಂಗಳವಾರ ಹೇಳಿದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘ಕೋವಿಡ್‌ ನಂತರ ಸಹಕಾರಿ ಸಂಘಗಳ ಪರಿಸ್ಥಿತಿ ಹೇಗಿದೆ. ಯಾವ ಸಂಘಗಳು ನಷ್ಟದಲ್ಲಿವೆ, ಯಾವ ಸಂಘಗಳು ಲಾಭದಲ್ಲಿವೆ ಎಂಬುದನ್ನು ಅರಿಯಲು ಸಮೀಕ್ಷೆ ಮಾಡಿಸಲಾಗುತ್ತದೆ. ನಷ್ಟದಲ್ಲಿರುವ ಸಂಘಗಳ ಅಭಿವೃದ್ಧಿಗೆ ಶ್ರಮಿಸಲಿದ್ದೇವೆ. ಮಹಾಮಂಡಳವು ಸಹಕಾರ ಕ್ಷೇತ್ರದ ಮಾತೃ ಸಂಸ್ಥೆ. ಇಂತಹ ಸಂಸ್ಥೆಯ ಅಧ್ಯಕ್ಷ ಗಾದಿಗೆ ಏರಿರುವುದು ಸಂತಸ ನೀಡಿದೆ. ಸಹಕರಿಸಿದ ಎಲ್ಲರಿಗೂ ಆಭಾರಿಯಾಗಿದ್ದೇನೆ’ ಎಂದರು.

ಮಾಜಿ ಸಚಿವರೂ ಆಗಿರುವ ದೇವೇಗೌಡ, ಐದನೇ ಬಾರಿಗೆ ಈ ಹುದ್ದೆ ಅಲಂಕರಿಸಿದ್ದಾರೆ. ಬೆಳಗಾವಿಯ ಜಗದೀಶ ಮಲ್ಲಿಕಾರ್ಜುನ ಕವಟಗಿ ಮಠ ಅವರು ಉಪಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದರು. ಚುನಾವಣಾಧಿಕಾರಿ ಮನೋಜ್‍ಚಂದ್ರ ಇವರ ಆಯ್ಕೆ ಪ್ರಕಟಿಸಿದರು.

ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ‘ಜಿ.ಟಿ.ದೇವೇಗೌಡ ಅವರು ಸಹಕಾರಿ ಕ್ಷೇತ್ರದಲ್ಲಿ ಸಾಕಷ್ಟು ಅನುಭವ ಹೊಂದಿದ್ದಾರೆ. ಮುಂದಿನ 5 ವರ್ಷ ಸಂಸ್ಥೆಯನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಲಿದ್ದಾರೆ. ಅವರಿಗೆ ಸರ್ಕಾರದಿಂದ ಎಲ್ಲಾ ರೀತಿಯ ಸಹಕಾರ ನೀಡಲಿದ್ದೇವೆ’ ಎಂದರು.

ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕ್‌ಗಳ ಮಹಾಮಂಡಳದ ಅಧ್ಯಕ್ಷ ಎಚ್.ಕೆ.ಪಾಟೀಲ್, ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿ ಪ್ರಕಾಶ್, ಉಪಾಧ್ಯಕ್ಷ ಜಿ.ಡಿ.ಹರೀಶ್ ಗೌಡ, ಸಹಕಾರ ಮಾರುಕಟ್ಟೆ ಮಹಾಮಂಡಳದ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್, ಸಹಕಾರ ಪತ್ತಿನ ಸಂಘಗಳ ಮಹಾಮಂಡಳದ ಅಧ್ಯಕ್ಷೆ ಲಲಿತಾ ಜಿ.ಟಿ.ದೇವೇಗೌಡ, ಸಹಕಾರ ಮಹಿಳಾ ಮಂಡಳದ ಅಧ್ಯಕ್ಷೆ ಶಕುಂತಲಾ ಬೆಲದಾಳೆ ಅಭಿನಂದಿಸಿದರು.

ನೂತನ ನಿರ್ದೇಶಕರು: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜಿ.ಟಿ.ದೇವೇಗೌಡ ಅವರ ತಂಡದ ಎಲ್ಲಾ ಅಭ್ಯರ್ಥಿಗಳು ಗೆದ್ದರು.

13 ಸ್ಥಾನಗಳಿಗೆ 26 ಅಭ್ಯರ್ಥಿಗಳು ಕಣದಲ್ಲಿದ್ದರು. ಇತರೆ ವಲಯದ ಒಂದು ಸ್ಥಾನಕ್ಕೆ 4 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

ನಿರ್ದೇಶಕರ ವಿವರ:

ಮೈಸೂರು ವಿಭಾಗ: ಜಿ.ಟಿ.ದೇವೇಗೌಡ, ಬಿ.ಸಿ.ಲೋಕಪ್ಪ ಗೌಡ, ಜಯಕರ ಶೆಟ್ಟಿ ಬಿ.ಇಂದ್ರಾಳಿ.

ಬೆಂಗಳೂರು ವಿಭಾಗ: ಹೆಚ್.ಎನ್.ಅಶೋಕ, ಎ.ಸಿ.ನಾಗರಾಜ್, ರಾಮರೆಡ್ಡಿ, ಬಿ.ಡಿ.ಭೂಕಾಂತ.

ಬೆಳಗಾವಿ ವಿಭಾಗ: ಜಗದೀಶ ಮಲ್ಲಿಕಾರ್ಜುನ ಕವಟಗಿ ಮಠ, ಈರಣ್ಣ ಪಟ್ಟಣಶೆಟ್ಟಿ, ಬಸವರಾಜ ನಿ.ಅರಬಗೊಂಡ.

ಕಲಬುರ್ಗಿ ವಿಭಾಗ: ಶೇಖರಗೌಡ ಮಾಲಿಪಾಟೀಲ, ಉಮಾಕಾಂತ ನಾಗಮಾರಪಳ್ಳಿ, ಜೆ.ಎಂ.ಶಿವಪ್ರಸಾದ್.

ಇತರೆ ಸಹಕಾರ ಸಂಘಗಳ ಕ್ಷೇತ್ರ: ಗದಿಗೆಪ್ಪ ಗೌಡ ಪಾಟೀಲ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT