ಬೆಂಗಳೂರು: ರಾಜ್ಯದಾದ್ಯಂತ ಸಾಂತ್ವನ ಕೇಂದ್ರಗಳನ್ನು ಪುನರಾರಂಭ ಮಾಡುವಂತೆ ಆಗ್ರಹಿಸಿ, ಈ ಕೇಂದ್ರಗಳ ನೌಕರರು ಸೆಪ್ಟೆಂಬರ್ 6ರಂದು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಲಿದ್ದಾರೆ.
ಸಾಂತ್ವನ ಕೇಂದ್ರಗಳ ನೌಕರರ ಸಂಘಟನೆಯ ಪ್ರಮುಖರಾದ ಡಾ. ಇಸಬೆಲ್ಲಾ ಕ್ಸೇವಿಯರ್, ಎನ್.ಎಂ. ಮೇಟಿ, ಜಗದೀಶ್ ನಾವಳ್ಳಿ ಮತ್ತು ಭೀಮಯ್ಯ ನೇತೃತ್ವದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಪ್ರತಿ ಜಿಲ್ಲೆಯಿಂದ ತಲಾ 15 ಜನರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ನಿರ್ಧರಿಸಲಾಗಿದೆ.
ನೊಂದ ಮಹಿಳೆಯರಿಗೆ ಸಾಂತ್ವನ ಹೇಳುವುದಕ್ಕಾಗಿ ರಾಜ್ಯದ ವಿವಿಧೆಡೆ 187 ಸಾಂತ್ವನ ಕೇಂದ್ರಗಳನ್ನು 2001ರಲ್ಲಿ ಆರಂಭಿಸಲಾಗಿತ್ತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು, ಅನುದಾನದ ಕೊರತೆಯ ಕಾರಣ ನೀಡಿ ಈ ಕೇಂದ್ರಗಳ ಬಾಗಿಲು ಮುಚ್ಚಿದೆ. ಇದರಿಂದ ಉದ್ಯೋಗ ಕಳೆದುಕೊಂಡಿರುವ ನೌಕರರು ಪ್ರತಿಭಟನೆಗೆ ಮುಂದಾಗಿದ್ದಾರೆ.
‘ಸಾಂತ್ವನ ಕೇಂದ್ರಗಳನ್ನು ತಕ್ಷಣ ಪುನರಾರಂಭ ಮಾಡಬೇಕು ಎಂಬುದು ನಮ್ಮ ಬೇಡಿಕೆ. ಸೆ.6ರಂದು ಸ್ವಾತಂತ್ರ್ಯ ಉದ್ಯಾನದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಲಾಗುವುದು. ಪ್ರತಿಭಟನೆಗೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಅವರಿಂದ ಅನುಮತಿಯನ್ನೂ ಪಡೆಯಲಾಗಿದೆ’ ಎಂದು ಹೋರಾಟ ಸಮಿತಿಯ ಸಂಚಾಲಕಿ ಇಸಬೆಲ್ಲಾ ಕ್ಸೇವಿಯರ್ ತಿಳಿಸಿದ್ದಾರೆ.