ಹರಿಹರ (ದಾವಣಗೆರೆ ಜಿಲ್ಲೆ): ‘ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿ ಪ್ರಮಾಣ ಹೆಚ್ಚಿಸುವಂತೆ ಇದುವರೆಗೂ ಆಗ್ರಹಿಸುತ್ತಿದ್ದವರು ಈಗ ಸಂವಿಧಾನದ ಪರಿಚ್ಛೇದ– 9ಕ್ಕೆ ಸೇರಿಸುವಂತೆ ಒತ್ತಾಯಿಸುತ್ತಿದ್ದಾರೆ. ಮೀಸಲಾತಿ ಹೆಚ್ಚಳದ ಮೊದಲ ಹೆಜ್ಜೆ ಇರಿಸಿರುವ ನಮಗೆ ಎರಡನೇ ಹೆಜ್ಜೆ ಇಡೋದು ಗೊತ್ತು. ಪರಿಚ್ಛೇದ– 9ಕ್ಕೆ ಸೇರಿಸುವ ಪ್ರಕ್ರಿಯೆ ಜಾರಿಯಲ್ಲಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಹರಿಹರ ತಾಲ್ಲೂಕಿನ ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ನಡೆದ ವಾಲ್ಮೀಕಿ ಜಾತ್ರೆಯಲ್ಲಿ ಗುರುವಾರ ಮಧ್ಯಾಹ್ನ ಮಾತನಾಡಿದ ಅವರು, ಬೆಳಿಗ್ಗೆ ಸಿದ್ದರಾಮಯ್ಯ ಅವರ ಆಗ್ರಹ ಕುರಿತು ಪ್ರತಿಕ್ರಿಯೆ ನೀಡಿದರು.
‘ನೀವು ಅಧಿಕಾರದಲ್ಲಿ ಇರುವಾಗ ಮೀಸಲಾತಿ ಹೆಚ್ಚಿಸದೇ ಈಗ ಮಾತನಾಡುತ್ತಿದ್ದೀರಿ. ಮಾತು, ಭಾಷಣದಿಂದ ಸಾಮಾಜಿಕ ನ್ಯಾಯ ಸಿಗುವುದಿಲ್ಲ. ಮಾತಿನಲ್ಲಿ ಮರುಳು ಮಾಡುವವರು ನಾವಲ್ಲ. ಸಾಮಾಜಿಕ ನ್ಯಾಯ ಒದಗಿಸಲು ಹೃದಯವಂತಿಕೆ ಬೇಕು. ನಾವು ಜನರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸವನ್ನು ಮಾಡುತ್ತಿದ್ದೇವೆ’ ಎಂದರು.
‘ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಹೆಚ್ಚಳ ಮಾಡಲಾಗಿರುವ ಹೊಸ ಮೀಸಲಾತಿಯ ಆಧಾರದಲ್ಲಿಯೇ ಮುಂದಿನ ನೇಮಕಾತಿ, ಬಡ್ತಿಗಳು ನಡೆಯಬೇಕು ಎಂಬ ಆದೇಶವನ್ನೂ ಹೊರಡಿಸಿದ್ದೇನೆ’ ಎಂದರು.