ಬೆಂಗಳೂರು: ಜನವರಿ 1ರಿಂದ ಶಾಲೆ, ಕಾಲೇಜು ಆರಂಭಿಸುವ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದರು.
ವಿಧಾನಸೌಧದಲ್ಲಿ ನಡೆದ ಸಭೆಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, 'ಮೂರು ದಿನಗಳ ಹಿಂದೆ ಮುಖ್ಯಮಂತ್ರಿ ಜೊತೆ ನಡೆದ ತಾಂತ್ರಿಕಸಲಹಾ ಸಮಿತಿ ಸಭೆಯಲ್ಲಿ ಶಾಲೆ, ಕಾಲೇಜು ಆರಂಭಿಸುವಕುರಿತು ನಿರ್ಧರಿಸಲಾಗಿತ್ತು. ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ತರಗತಿ ಆರಂಭಿಸಲು ಸಮಿತಿ ಒಪ್ಪಿದೆ. ಮಾರ್ಗಸೂಚಿಯನ್ನೂ ತಾಂತ್ರಿಕ ಸಲಹ ಸಮಿತಿ ನಿರ್ದೇಶನದ ಅನ್ವಯ ಬಿಡುಗಡೆ ಮಾಡಿದ್ದೇವೆ ಎಂದರು.
ಎಲ್ಲಾ ಜಿಲ್ಲಾ ಪಂಚಾಯಿತಿಯ ಸಿಇಓ, ಡಿಡಿಪಿಐ, ಡಿಡಿಪಿಯು, ಪ್ರಾಂಶುಪಾಲರ ಜೊತೆ ಸಭೆ ನಡೆಸಲಾಯಿತು. ಸಭೆಯಲ್ಲಿಯೂ ಇದೆ ಅಭಿಪ್ರಾಯ ವ್ಯಕ್ತವಾಗಿದೆ. ಬಹಳ ಯಶಸ್ವಿಯಾಗಿ ಎಸ್ಎಸ್ ಎಲ್ಸಿ ಪರೀಕ್ಷೆ ನಡೆಸಿದ್ದೇವೆ. ಇದಕ್ಕೆ ಜಿಲ್ಲಾಡಳಿತ, ಎಲ್ಲಾ ಇಲಾಖೆಗಳ ಸಹಕಾರದಿಂದ ಮಾತ್ರ ಸಾಧ್ಯವಾಯಿತು ಎಂದರು.
6,7,8,9ನೇ ತರಗತಿಗೆ ವಿದ್ಯಾಗಮ ಆರಂಭದ ಬಗ್ಗೆಯೂ ಚರ್ಚೆ ಮಾಡಿದ್ದೇವೆ. ಎಲ್ಲ ಶಿಕ್ಷಕರಿಗೂ ಕೂಡ ಆರ್ ಟಿ ಪಿಸಿಆರ್ ಟೆಸ್ಟ್ಗೆ ಸೂಚನೆ ನೀಡಲಾಗಿದೆ. 14 ಜಿಲ್ಲೆಗಳ ಸಿಇಓಗಳು ಕೆಲವು ಸಲಹೆ, ಸಮಸ್ಯೆ, ಅಭಿಪ್ರಾಯಗಳನ್ನ ಹೇಳಿದರು. ಶಾಲೆ ಆರಂಭವನ್ನು ಯಶಸ್ವಿ ಮಾಡುವ ಭರವಸೆ ನೀಡಿದ್ದಾರೆ.ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಪೋಷಕರ ಒಪ್ಪಿಗೆ ಪತ್ರ ಕಡ್ಡಾಯ. ಇಲ್ಲದಿದ್ದರೆ ಶಾಲೆಗೆ ಪ್ರವೇಶವಿಲ್ಲ. 50 ವರ್ಷ ದಾಟಿದ ಶಿಕ್ಷಕರು ಮಾಸ್ಕ್ ಜೊತೆ ಫೇಸ್ ಶೀಲ್ಡ್ ಕೂಡ ಕಡ್ಡಾಯ ಎಂದರು.
ಪೋಷಕರ ಆಯ್ಕೆ:ಶಾಲೆಗ ಮಕ್ಕಳನ್ನು ಕಳಿಸುವುದುದು ಪೋಷಕರ ಆಯ್ಕೆ. ಮಧ್ಯಾಹ್ನ ಬಿಸಿ ಊಟ ನೀಡುವುದಿಲ್ಲ. ಕೇಂದ್ರ ಹಾಗೂ ತಾಂತ್ರಿಕ ಸಲಹ ಸಮಿತಿಯನ್ವಯ ಬಿಸಿಯೂಟವಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ನಿರ್ಧರಿಸುತ್ತೇವೆ. ಕ್ಷೀರಭಾಗ್ಯ ಆರಂಭಿಸುವಂತೆ ಕೆಲವರು ಅಭಿಪ್ರಾಯ ತಿಳಿಸಿದರು.
ಗುರುವಾರ ಎಲ್ಲ ವಿಭಾಗದ ಡಿಡಿಪಿಐ, ಡಿಡಿಪಿಯುಗಳು ತಮ್ಮ ತಮ್ಮ ಜಿಲ್ಲೆಯ ಅನುದಾನಿತ ಪದವಿ ಪೂರ್ವ, ಅನುದಾನ ರಹಿತ ಕಾಲೇಜುಗಳ ಮುಖ್ಯಸ್ಥರ ಜೊತೆ ಸುರಕ್ಷತಾ ಕ್ರಮದ ಬಗ್ಗೆ ಸಭೆ ನಡೆಸಲು ಸೂಚನೆ ನೀಡಿದ್ದೇನೆ ಎಂದರು.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಂದ ಕೆಲವರು ಎಲ್ಲ ತರಗತಿಗಳನ್ನು ಪ್ರಾರಂಭಿಸುವಂತೆಕೇಳ್ತಿದ್ದಾರೆ. ಆದರೆ, ಎಲ್ಲ ತರಗತಿ ಆರಂಭಿಸೋದು ಶಿಕ್ಷಣ ಇಲಾಖೆ ನಿರ್ಧಾರವಲ್ಲ. ತಾಂತ್ರಿಕ ಸಮಿತಿ ಇಲ್ಲಿ ಮುಖ್ಯ ಪಾತ್ರ ವಹಿಸುತ್ತೆ. ಎಸ್ ಎಸ್ ಎಲ್ ಸಿ ಪರೀಕ್ಷೆ ನಮಗೆ ಪತಿಷ್ಠೆ ವಿಷಯ ಆಗಿರಲಿಲ್ಲ. ಬದ್ದತೆಯ ವಿಷಯವಾಗಿತ್ತು. ಈಗಲೂ ಶಾಲೆ ಆರಂಭ ವಿಚಾರ ಬದ್ಧತೆ ವಿಷಯ ಎಂದು ವಿವರಿಸಿದರು.
ಕೊರೊನಾ ವೈರಸ್ ರೂಪಾಂತರದ ನಡುವೆಯೂ ಶಾಲೆ ಆರಂಭಿಸುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ತಾಂತ್ರಿಕ ಸಲಹಾ ಸಮಿತಿ ಪುನರ್ ವಿಮರ್ಶೆ ಮಾಡುವ ಪ್ರಮೇಯ ಬಂದಿಲ್ಲ ಅಂತ ಹೇಳಿದ್ದಾರೆ. ಹೀಗಾಗಿ, ಅವರ ಮಾರ್ಗದರ್ಶನದಂತೆ ಹೆಜ್ಜೆ ಇಡ್ತಿದ್ದೀವಿ. ಯಾವ ಪೋಷಕರಿಗೂ ನಾವು ಬಲವಂತ ಮಾಡ್ತಿಲ್ಲ. ಸ್ವಯಂ ಪ್ರೇರಿತರಾಗಿ ನಿರ್ಧಾರ ಕೈಗೊಳ್ಳಬಹುದು. ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ದತಿಗಳು ಹೆಚ್ಚಾಗ್ತಿದೆ. ಹೀಗಾಗಿ ಶಾಲಾ ಆರಂಭ ಮಾಡುತ್ತಿದ್ದೇವೆ ಎಂದೂ ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.