ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒತ್ತಡ ನಿವಾರಣೆಗೆ ಧ್ಯಾನವೇ ಮಾರ್ಗ: ರವಿಶಂಕರ್ ಗುರೂಜಿ

ಎಫ್ಒಎಬಿ ಸಮ್ಮಿಲನದಲ್ಲಿ ಆರ್ಟ್‌ ಆಫ್ ಲಿವಿಂಗ್‌ನ ಮುಖ್ಯಸ್ಥ ರವಿಶಂಕರ್ ಗುರೂಜಿ
Last Updated 7 ಫೆಬ್ರುವರಿ 2023, 16:51 IST
ಅಕ್ಷರ ಗಾತ್ರ

ಬೆಳಗಾವಿ: ‘ಒತ್ತಡ, ಖಿನ್ನತೆ ಮತ್ತು ಅಪರಾಧಿ ಮನಸ್ಥಿತಿಯಿಂದ ಹೊರಬರಬೇಕೆಂದರೆ ಧ್ಯಾನ ಒಂದೇ ಮಾರ್ಗ’ ಎಂದು ಆರ್ಟ್‌ ಆಫ್ ಲಿವಿಂಗ್‌ನ ಮುಖ್ಯಸ್ಥ ಶ್ರೀ ಶ್ರೀ ರವಿಶಂಕರ್ ಗುರೂಜಿ ಹೇಳಿದರು.

ಇಲ್ಲಿನ ಕೆಎಲ್ಇ ಸಂಸ್ಥೆಯ ಶತಮಾನೋತ್ಸವ ಸಭಾಭವನದಲ್ಲಿ ಮಂಗಳವಾರ ಫೆಡರೇಷನ್ ಆಫ್ ಅಸೋಸಿಯೇಷನ್ಸ್ ಆಫ್ ಬೆಳಗಾವಿ (ಎಫ್ಒಎಬಿ) ಲೋಗೋ ಲೋಕಾರ್ಪಣೆ
ಗೊಳಿಸಿ ಆಶೀರ್ವಚನ ನೀಡಿದರು.

‘ಯುವಜನರು ಒತ್ತಡದಲ್ಲಿ ಬಳಲು
ವುದು ಎದ್ದುಕಾಣಿಸುತ್ತಿದೆ. ಜಗತ್ತಿನ ಬಹುಪಾಲು ದೇಶಗಳಲ್ಲೂ ಈ ಸಮಸ್ಯೆ ಇದೆ. ಅಮೆರಿಕದಲ್ಲಿ ಒಂಟಿತನದಿಂದ ಒತ್ತಡ ಹೆಚ್ಚಾಗುತ್ತಿದೆ. ಅಲ್ಲಿನ ಸರ್ಕಾರ ಒಂಟಿತನ ನಿವಾರಣೆಯ ಇಲಾಖೆಯನ್ನೇ ರಚಿಸಿದೆ’ ಎಂದರು.

‘ಧ್ಯಾನ ಹಾಗೂ ಪ್ರಾಣಾಯಾಮ ಸುಲಭವಾಗಿ ಒತ್ತಡ ನಿವಾರಣೆ ಮಾಡುವ ಕ್ರಿಯೆಗಳು. ಆರೋಗ್ಯ ಕೈಕೊಟ್ಟರೆ, ದುಶ್ಚಟಗಳಿಗೆ ಒಳಗಾ
ದವರು ಆರು ದಿನಗಳ ಸುದರ್ಶನ ಕ್ರಿಯೆ ಅನುಸರಿಸಿದರೆ ಸಾಕು. ಸಮಸ್ಯೆ ಪರಿಹಾರ ಸಾಧ್ಯ’ ಎಂದರು.

‘ಕೋವಿಡ್ ನಂತರದ ದಿನಗಳಲ್ಲಿ ಜಗತ್ತಿನಲ್ಲಿ ಖಿನ್ನತೆ ಹೆಚ್ಚುತ್ತಿದೆ. ಪ್ರತಿ 40 ಸೆಕೆಂಡ್‌ಗೆ ಒಂದು ಆತ್ಮಹತ್ಯೆ ನಡೆಯುತ್ತಿದೆ. ಇದನ್ನು ನಿಯಂತ್ರಿಸ
ಲೇಬೇಕು ಎಂಬುದು ಆರ್ಟ್‌ ಆಫ್‌ ಲಿವಿಂಗ್‌ ಉದ್ದೇಶ. ಹೀಗಾಗಿ, ಜಗತ್ತಿನ ಬೇರೆಬೇರೆ ದೇಶಗಳಲ್ಲಿ ಸುದರ್ಶನ ಕ್ರಿಯೆ ಪರಿಚಯಿಸಲಾಗುತ್ತಿದೆ’ ಎಂದರು.

ಬೆಳಗಾವಿ ಸಮೃದ್ಧ ನೆಲ: ‘ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಸಂಘಟನೆಗಳು ಬೆಳಗಾವಿಯ ಅಭಿವೃದ್ಧಿಗಾಗಿ ಒಗ್ಗೂಡಿರುವುದು ಒಳ್ಳೆಯ ನಡೆ. ಬೆಳಗಾವಿ ಎಂದಾಕ್ಷಣ ಗಡಿ ಗದ್ದಲ ಎಂದಷ್ಟೇ ಹೊರಗಿನವರು ಭಾವಿಸಿದ್ದಾರೆ. ಇಲ್ಲಿ ನಿಜ ಸ್ಥಿತಿಯೇ ಬೇರೆ. ಉದ್ಯಮ ಸ್ನೇಹಿ ವಾತಾವರಣವಿದೆ. ಒಂದಾಗಿ ದುಡಿಯುವ ಮನಸ್ಸುಗಳು ಇವೆ’ ಎಂದು ಪ್ರಶಂಸಿಸಿದರು.

ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ, ಎಸ್‌ಪಿ ಡಾ.ಸಂಜೀವ ಪಾಟೀಲ, ವಿಟಿಯು ಕುಲಪತಿ ಡಾ.ವಿದ್ಯಾಶಂಕರ, ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯ ಕುಲಪತಿ ನಿತಿನ್ ಗಂಗನೆ, ಮರಾಠಾ ಲಘು ಪದಾತಿದಳದ ಕಮಾಂಡೆಂಟ್‌ ಬ್ರಿಗೇಡಿಯರ್ ಜಾಯ್‌ದೀಪ್‌ ಮುಖರ್ಜಿ, ಮಿಲಿಟರಿ ಜೆ.ಎಲ್.ವಿಂಗ್‌ ಕಮಾಂಡರ್ ಮೇಜರ್‌ ವಿ.ಕೆ. ಗುರಂಗ್, ವಿಮಾನ ನಿಲ್ದಾಣ ನಿರ್ದೇಶಕ ರಾಜೇಶ ಕುಮಾರ ಮೌರ್ಯ ಮಾತನಾಡಿದರು.

ಚೇಂಬರ್ ಆಫ್ ಕಾಮರ್ಸ್‌ ಅಧ್ಯಕ್ಷ ಹೇಮೇಂದ್ರ ಪೋರವಾಲ್ ಅವರು ರವಿಶಂಕರ ಗುರೂಜಿಯನ್ನು ಸನ್ಮಾನಿಸಿದರು. ಎಫ್ಒಎಬಿ ಸಂಚಾಲಕ ಚೈತನ್ಯ ಕುಲಕರ್ಣಿ, ಡಾ.ರಾಜೇಂದ್ರ ಬೆಳಗಾಂವ್ಕರ್ ಸೇರಿದಂತೆ 50ಕ್ಕೂ ಹೆಚ್ಚು ಎಫ್ಒಎಬಿಗಳ ಅಧ್ಯಕ್ಷ, ಕಾರ್ಯದರ್ಶಿಗಳು ಇದ್ದರು.

*

‘ಕೊರೊನಾ ಚೀನಾದ ಕೃತಕ ವೈರಸ್‌’

‘ಕೊರೊನಾ ಚೀನಾ ದೇಶವು ಕೃತಕವಾಗಿ ಸೃಷ್ಟಿಸಿದ ವೈರಸ್‌. ಇದಕ್ಕೆ ಅಮೆರಿಕ ನೆರವು ನೀಡಿದೆ. ದೇಶದ ಜನಸಂಖ್ಯೆ ಕಡಿಮೆ ಮಾಡಲು ಚೀನಾ ತುಳಿದ ದಾರಿ ಅಮಾನವೀಯ’ ಎಂದು ಶ್ರೀ ಶ್ರೀ ರವಿಶಂಕರ ಗುರೂಜಿ ಹೇಳಿದರು.

‘ಭಾರತೀಯರಾದ ನಾವು ಮಾತ್ರ ಕೊರೊನಾಗೆ ಲಸಿಕೆ ಕಂಡು ಹಿಡಿದು ಜಗತ್ತಿಗೆ ನೆರವಾದೆವು. ಆರ್ಟ್‌ ಆಫ್‌ ಲಿವಿಂಗ್‌ ಆಶ್ರಮವು 18 ಗಿಡಮೂಲಿಕೆಗಳ ಒಂದು ಔಷಧವನ್ನೂ ಸಿದ್ಧಪಡಿಸಿದೆ. ಇದಕ್ಕೆ ಕೊರೊನಾ ಮಾತ್ರವಲ್ಲ ಎಲ್ಲ ರೀತಿಯ ವೈರಾಣುಗಳನ್ನೂ ಸಂಪೂರ್ಣ ನಿರ್ನಾಮ ಮಾಡುವ ಶಕ್ತಿ ಇದೆ. ಸಂಶೋಧನೆ ಮತ್ತು ಪ್ರಾಯೋಗಿಕ ಹಂತಗಳು ಮುಗಿದಿವೆ. ಶೀಘ್ರ ಔಷಧ ಸಿಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT