ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಕ್ರತೀರ್ಥ ಸಮಿತಿ ಪರಿಷ್ಕರಿಸಿರುವ ಪಠ್ಯ ತಡೆಹಿಡಿಯಲು ಸಿಎಂಗೆ ಸಿದ್ದರಾಮಯ್ಯ ಪತ್ರ

Last Updated 6 ಜೂನ್ 2022, 11:33 IST
ಅಕ್ಷರ ಗಾತ್ರ

ಬೆಂಗಳೂರು: ‘ರೋಹಿತ್‌ ಚಕ್ರತೀರ್ಥ ನೇತೃತ್ವದ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ರೂಪಿಸಿರುವ ಪಠ್ಯ ಪುಸ್ತಕಗಳನ್ನು ತಕ್ಷಣ ತಡೆಹಿಡಿಯಬೇಕು. ಈ ಸಮಿತಿ ತೂರಿಸಿರುವ, ವಾಸ್ತವಕ್ಕೆ ದೂರವಾದ ಸಂಗತಿಗಳನ್ನು ಮತ್ತು ತಿರುಚಿರುವ ವಿಷಯಗಳ ಬಗ್ಗೆ ಉನ್ನತ ಮಟ್ಟದ ಸಮಿತಿಯಿಂದ ವರದಿ ಪಡೆಯಬೇಕು. ಇಷ್ಟೆಲ್ಲ ಎಡವಟ್ಟುಗಳಿಗೆ ಕಾರಣರಾದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರ ರಾಜೀನಾಮೆ‌ ಪಡೆಯಬೇಕು’ ಎಂದು ಒತ್ತಾಯಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.

‘ಈಗಾಗಲೇ ಶಾಲೆಗಳು ಆರಂಭಗೊಂಡಿರುವುದರಿಂದ ಮಕ್ಕಳಿಗೆ ತೊಂದರೆ ಆಗದಂತೆ ಹಿಂದಿನ ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿಯ ಪಠ್ಯಗಳನ್ನೇ ಪ್ರಸಕ್ತ ಸಾಲಿಗೂ ವಿತರಿಸಬೇಕು. ನಿಜವಾದ ಅರ್ಹತೆ ಇರುವ ಶಿಕ್ಷಣ ತಜ್ಞರ ಸಮಿತಿ ಮೂಲಕ ಪರಿಷ್ಕರಣಾ ಸಮಿತಿ ಮಾಡಿರುವ ಅದ್ವಾನಗಳನ್ನು ಸರಿಪಡಿಸಬೇಕು. ನಾಡಿನ ಸಂಸ್ಕೃತಿ, ಪರಂಪರೆ, ಚರಿತ್ರೆ, ಸಂವಿಧಾನದ ಆಶಯಗಳ ಬಗ್ಗೆ ಗೌರವ ಇರುವವರನ್ನು ಸಮಿತಿಗೆ ನೇಮಿಸಬೇಕು’ ಎಂದೂ ಆಗ್ರಹಿಸಿದ್ದಾರೆ.

‘ನಮ್ಮ ನಾಡಗೀತೆಯು ಸರ್ಕಾರದ ಅಧಿಕೃತ ಗುರುತು. ನಾಡಿನ ಸಾರ್ವಭೌಮತೆಯ ಸಂಕೇತ. ಇಂಥ ಗುರುತರವಾದ ಸಂಗತಿಗೆ ಅವಮಾನ ಮಾಡಿರುವ ರೋಹಿತ್‌ ಚಕ್ರತೀರ್ಥನನ್ನು ಸರ್ಕಾರ ಪಠ್ಯ ಪರಿಷ್ಕರಣಾ ಸಮಿತಿಯ ಅಧ್ಯಕ್ಷನನ್ನಾಗಿ ಮಾಡಿದ್ದು ಅಕ್ಷಮ್ಯ. ಈತನ ಮೇಲೆ ರಾಷ್ಟ್ರದ್ರೋಹದ ಪ್ರಕರಣ ದಾಖಲಿಸಿ ಕಾನೂನು ಕ್ರಮಕ್ಕೆ ಒಳಪಡಿಸಬೇಕು ಎನ್ನುವ ನಾಡಿನ ಜನತೆಯ, ಲೇಖಕ-ಬರಹಗಾರರ ಮತ್ತು ಸ್ವಾಮೀಜಿಗಳ ಆಗ್ರಹವನ್ನು ಸರ್ಕಾರ ತಕ್ಷಣ ಪಾಲಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

‘ನಾಡಿನ ಜನತೆಯ ಆಕ್ರೋಶದ ಬಳಿಕ ಬಹಳ ತಡವಾಗಿಯಾದರೂ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ವಿಸರ್ಜಿಸಿದ್ದೀರಿ. ಆದರೆ, ಈ ಸಮಿತಿ ಪಠ್ಯದೊಳಗೆ ತುರುಕಿರುವ ಸಂವಿಧಾನ ವಿರೋಧಿ ಮತ್ತು ಸಂಗತಿಗಳನ್ನು ಹಾಗೇ ಉಳಿಸಿಕೊಂಡಿದ್ದೀರಿ. ಜನರ ವಿವೇಕವನ್ನು ಶತಮಾನಗಳಿಂದ ತಿದ್ದುತ್ತಾ ಬಂದಿರುವ ಚಿಂತಕರ ಜೀವಪರ ವಿಚಾರಗಳಿದ್ದ ಪಠ್ಯಗಳಲ್ಲಿನ ವಾಕ್ಯ, ಪದ, ಪ್ಯಾರಾಗಳನ್ನು ತೆಗೆದುಹಾಕಿ, ಉಳಿದವಕ್ಕೆ ಕತ್ತರಿ ಹಾಕಿ ಮಕ್ಕಳ ಭವಿಷ್ಯಕ್ಕೆ ಮಾರಕವಾಗಿರುವ ಪ್ರತಿಗಾಮಿ ಹಾಗೂ ಜಾತಿ ಶ್ರೇಷ್ಠತೆಯ ವ್ಯಸನದ ಸಂಗತಿಗಳನ್ನು ಪಠ್ಯದೊಳಗೆ ಉಳಿಸಿಕೊಳ್ಳುವ ಸರ್ಕಾರದ ಹುನ್ನಾರ ಹಾಗೂ ಪ್ರಧಾನವಾಗಿ ಒಂದು ಜಾತಿಯವರ ಬರಹಗಳನ್ನು, ವಿಚಾರಗಳನ್ನು ನಾಡಿನ ಮೇಲೆ ಹೇರಲು ಹೊರಟಿರುವುದು ಅತ್ಯಂತ ಅಪಾಯಕಾರಿ ನಡೆಯಾಗಿದೆ ಎಂದು ನಾಡಿನ ಅನೇಕ ಚಿಂತಕರು ಪ್ರತಿಭಟಿಸಿದ್ದಾರೆ’ ಎಂದು ತಮ್ಮ ಸುದೀರ್ಘ ಪತ್ರದಲ್ಲಿ ಸಿದ್ದರಾಮಯ್ಯ ಉಲ್ಲೇಖಿಸಿದ್ದಾರೆ.

‘ಪಠ್ಯ ಪುಸ್ತಕ ಪರಿಷ್ಕರಣೆಗೆ ಅಗತ್ಯವಾದ ಬೌದ್ಧಿಕ ತಿಳಿವಳಿಕೆ ಮತ್ತು ಅರ್ಹತೆಗಳಿಲ್ಲದ, ಸಾಮಾಜಿಕ ತಾಣಗಳಲ್ಲಿ ಶೂದ್ರ-ದಲಿತ ಪರಂಪರೆ ಮತ್ತು ಸಂಸ್ಕೃತಿ ಬಗೆಗೆ ವಿಕೃತಿ ಕಾರಿಕೊಳ್ಳುವುದನ್ನೇ ಪಾಂಡಿತ್ಯ ಎಂದುಕೊಂಡಿರುವ ಹಾಗೂ ಮಹಿಳೆಯರ ಬಗ್ಗೆ ಕನಿಷ್ಠ ಗೌರವವೂ ಇಲ್ಲದಂತೆ ಬಹಿರಂಗವಾಗಿ ಪೋಸ್ಟ್‌ಗಳನ್ನು ಹಾಕಿ ಅಸಹ್ಯವಾಗಿ ಆಚರಿಸುತ್ತಿದ್ದ ವ್ಯಕ್ತಿಯನ್ನು ಪಠ್ಯ ಪರಿಷ್ಕರಣೆ ಸಮಿತಿಗೆ ಅಧ್ಯಕ್ಷನನ್ನಾಗಿ ಮಾಡಿ ನಾಡಿನ ಸಾಂಸ್ಕೃತಿಕ ಪರಂಪರೆಗೆ ದ್ರೋಹ ಎಸಗಿದ್ದು ಸರ್ಕಾರ ಮಾಡಿರುವ ಗಂಭೀರ ಅಪರಾಧ’ ಎಂದೂ ದೂರಿದ್ದಾರೆ.

‘ಸರ್ಕಾರದ ಈ ಅಪರಾಧಕ್ಕಾಗಿ ನಾಡಿನ ಪ್ರಮುಖ ಮಠಾಧೀಶರು, ಚಿಂತಕರು ಆಕ್ರೋಶ ಹೊರ ಹಾಕಿದ್ದಾರೆ. ನಾಡಿನ ಸಾಂಸ್ಕೃತಿಕ ಜಗತ್ತು ವ್ಯಾಪಕ ಪ್ರತಿರೋಧ ವ್ಯಕ್ತಪಡಿಸಿದೆ. ಪಠ್ಯಗಳಲ್ಲಿ ಬಸವಣ್ಣ, ನಾರಾಯಣ ಗುರು, ಅಂಬೇಡ್ಕರ್, ಕುವೆಂಪು, ಸ್ವಾಮಿ ವಿವೇಕಾನಂದ, ಸಾವಿತ್ರಿಬಾಯಿ ಫುಲೆ, ರಾಣಿ ಅಬ್ಬಕ್ಕ ಮುಂತಾದ ಈ ನೆಲದ ನಿಜವಾದ ಜ್ಞಾನ ಪರಂಪರೆ ಮತ್ತು ಅಧ್ಯಾತ್ಮ ಪರಂಪರೆಯ ಹಲವು ಮಹಾತ್ಮರ ಕುರಿತಾದ ಪಠ್ಯಗಳನ್ನು ತೆಗೆದು ಹಾಕಿರುವುದಕ್ಕೆ ಅಥವಾ ಉಳಿಸಿಕೊಂಡಿರುವ ಪಠ್ಯಗಳಲ್ಲಿನ ಸಂವಿಧಾನದ ಆಶಯಗಳನ್ನು ತೆಗೆದಿರುವುದಕ್ಕೆ ಇದುವರೆಗೂ ಸರ್ಕಾರ ಕ್ಷಮೆ ಕೇಳಿಲ್ಲ. ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುತ್ತೇವೆ ಎನ್ನುವ ಭರವಸೆಯನ್ನೂ ನೀಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಬಸವಣ್ಣನವರ ಕುರಿತಂತೆ ತಿರುಚಿದ ಸಂಗತಿಗಳನ್ನು ಮಕ್ಕಳಿಗೆ ಬೋಧಿಸಲು ಹೊರಟಿದ್ದಾರೆ ಎಂದು ಪಂಡಿತಾರಾಧ್ಯ ಸ್ವಾಮೀಜಿ ಮತ್ತು ಲಿಂಗಾಯತ ಮಠಾಧೀಶರ ಒಕ್ಕೂಟದವರು ನಿಮ್ಮ ಗಮನಕ್ಕೆ ತಂದರು. ಬಳಿಕ, ಬಸವಣ್ಣನವರ ಪಠ್ಯವನ್ನು ತಿರುಚಿ, ಶರಣ ಸಂಸ್ಕೃತಿ ಪರಂಪರೆಗೆ ವಿರುದ್ಧವಾದ ಅಂಶಗಳನ್ನು ಕಪಟತನದಿಂದ ಪಠ್ಯದಲ್ಲಿ ಸೇರಿಸಿದ್ದನ್ನು ಪರಿಷ್ಕರಿಸಲು ಸರ್ಕಾರ ಒಪ್ಪಿಕೊಂಡಿರುವುದನ್ನು ನಾನು ಸ್ವಾಗತಿಸುತ್ತೇನೆ. ಆದರೆ, ಈ ಪರಿಷ್ಕರಣೆಯನ್ನು ಯಾರಿಂದ ಮಾಡಿಸುತ್ತೀರಿ? ಬಸವಣ್ಣನವರಿಗೆ ಬಗೆದಿರುವ ದ್ರೋಹದಂತೆಯೇ ಇನ್ನಿತರೆ ಪಾಠಗಳಲ್ಲಿ ಮಾಡಿರುವ ಅನಿಷ್ಠಗಳನ್ನು ಅಳಿಸುವ ಬಗ್ಗೆ ಸರ್ಕಾರದ ನಿಲುವು ಏನು ಎಂಬುದರ ಕುರಿತು ಸರ್ಕಾರ ಏನನ್ನೂ ಹೇಳಿಲ್ಲ. ಹೀಗಾಗಿ ಪಠ್ಯ ಪರಿಷ್ಕರಣಾ ಸಮಿತಿಯ ಆಯ್ಕೆಯಿಂದ ಅದನ್ನು ವಿಸರ್ಜಿಸುವವರೆಗೂ ಸರ್ಕಾರ ಮೇಲಿಂದ ಮೇಲೆ ಅಪರಾಧ ಮಾಡುತ್ತಲೇ ಇದೆ’ ಎಂದಿದ್ದಾರೆ.

‘ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಎನ್ನುವ ಸಾಲಿನಿಂದ ‘ಸಂವಿಧಾನ ಶಿಲ್ಪಿ’ ಎನ್ನುವ ಪದಕ್ಕೆ ಕತ್ತರಿ ಹಾಕಲಾಗಿದೆ. ಅಂಬೇಡ್ಕರ್ ಅವರನ್ನು ಸಂವಿಧಾನ ಶಿಲ್ಪಿ ಎಂದು ಇಡಿ ವಿಶ್ವವೇ ಒಪ್ಪಿಕೊಂಡಿದೆ. ಆದರೆ, ಮನುವಾದಿ ವಿಕೃತ ರೋಗಿಷ್ಠರಿಗೆ ಮಾತ್ರ ಬಾಬಾ ಸಾಹೇಬರು ಕನಸಿನಲ್ಲೂ ದಿಗಿಲು ಬೀಳಿಸುತ್ತಾರೆ. ನಿಮ್ಮ ಸರ್ಕಾರಕ್ಕೆ ಇದನ್ನು ಕತ್ತರಿಸಿ ಹಾಕುವ ರೋಗ ಬಂದಿದೆ. ಜತೆಗೆ ಕನ್ನಡ ರಾಜ್ಯೋತ್ಸವದ ಕುರಿತ ಪಠ್ಯವನ್ನೂ ಕಿತ್ತುಹಾಕಿ ಬಿಜೆಪಿ ನಾಡದ್ರೋಹಿ ಪರಂಪರೆಯನ್ನು ಮುಂದುವರೆಸಿದೆ. ಇಂಥ ಅಸಹ್ಯದ ನೂರಾರು ಅಧ್ವಾನಗಳನ್ನು ಪಠ್ಯ ಪರಿಷ್ಕರಣ ಸಮಿತಿ ಮಾಡಿದೆ’

‘ದೇವನೂರ ಮಹದೇವ, ಮೂಡ್ನಾಕೂಡು ಚಿನ್ನಸ್ವಾಮಿಯವರಂಥ ಹಿರಿಯ ಬರಹಗಾರರು ತಮ್ಮ ತಕರಾರುಗಳನ್ನು ವ್ಯಕ್ತಪಡಿಸಿದಾಗ ಆ ತಕರಾರುಗಳನ್ನು ಕೇಳಿಸಿಕೊಳ್ಳುವ ಸೌಜನ್ಯವೂ ಇಲ್ಲದಂತೆ ಸರ್ಕಾರ ಮತ್ತು ಪಠ್ಯ ಪುಸ್ತಕ ಸಮಿತಿ ವಿಕೃತಿ ಮೆರೆದಿದೆ. ನಾಡಿನ ಹಿರಿಯ ಮಠಾಧೀಶರು ತಮ್ಮ ವಿರೋಧವನ್ನು ವ್ಯಕ್ತಪಡಿಸಿದಾಗ ಅವರುಗಳ ಸಾತ್ವಿಕ ಸಿಟ್ಟನ್ನೂ ಲೇವಡಿ ಮಾಡುವ ರೀತಿಯಲ್ಲಿ ಸಚಿವರು ಮತ್ತು ಪಕ್ಷದ ಮುಖಂಡರಿಂದ ರಾಜಕೀಯ ಹೇಳಿಕೆ ಕೊಡಿಸಲಾಗಿದೆ. ಮಠಾಧೀಶರನ್ನು ಕಾಂಗ್ರೆಸ್ ವಕ್ತಾರರು ಎನ್ನುವ ಅರ್ಥ ಬರುವಂತೆ ಸಚಿವರುಗಳಿಂದ ಪರೋಕ್ಷ ಹೇಳಿಕೆ ಕೊಡಿಸಿ ಮಠ ಪರಂಪರೆಗೆ ಅವಮಾನ ಎಸಗಿದಂತೆ ಸರ್ಕಾರ ವರ್ತಿಸಿದೆ’ ಎಂದೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಪಠ್ಯ ಪರಿಷ್ಕರಣೆಗೆ ಸಂವಿಧಾನದಲ್ಲಿ ನಂಬಿಕೆಯೇ ಇಲ್ಲದ ಮತ್ತು ಈ ನಾಡಿನ ಜನ ಸಂಸ್ಕೃತಿ ಬಗ್ಗೆ ಕನಿಷ್ಠ ಗೌರವ ಇಲ್ಲದವರನ್ನೇ ಹುಡುಕಿ ಸಮಿತಿಯನ್ನು ರಚಿಸಿದ್ದು ಮತ್ತು ನಾಡಿನ ಪ್ರಜ್ಞಾವಂತ ಸಮುದಾಯದ ಆಗ್ರಹಕ್ಕೂ ಲೆಕ್ಕಿಸದೆ ಈ ಸಮಿತಿಯ ಎಲ್ಲ ನಿಯಮಬಾಹಿರ ಮತ್ತು ನಾಡದ್ರೋಹಿ ವಿಚಾರಗಳನ್ನು ಪಠ್ಯಗಳಲ್ಲಿ ಉಳಿಸಿಕೊಂಡು ಕೇವಲ ಸಮಿತಿಯನ್ನು ವಿಸರ್ಜಿಸಿರುವುದನ್ನು ನೋಡಿದರೆ ಇದೆಲ್ಲವೂ ಪೂರ್ವಯೋಜಿತ ಷಡ್ಯಂತ್ರದಂತೆ ಕಾಣುತ್ತಿದೆ’ ಎಂದೂ ಸಿದ್ದರಾಮಯ್ಯ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT