ಬೆಂಗಳೂರು: ಸಿದ್ದರಾಮೋತ್ಸವಕ್ಕೆ ₹25 ಕೋಟಿ ಖರ್ಚು ಮಾಡಲಾಗುತ್ತಿದೆ ಎಂಬ ವರದಿಯನ್ನು ಉಲ್ಲೇಖಿಸಿ ಬಿಜೆಪಿ ಸರಣಿ ಟ್ವೀಟ್ ಮಾಡಿದೆ.
‘ಸಿದ್ದರಾಮಯ್ಯ ಹುಟ್ಟುಹಬ್ಬ ರಾಜಕೀಯಕ್ಕಾಗಿ ಅಲ್ಲ ಎಂದು ಹೇಳುತ್ತಿರುವ ಕೈ ನಾಯಕರು, ₹25 ಕೋಟಿ ವೆಚ್ಚದಲ್ಲಿ ಸಿದ್ದರಾಮೋತ್ಸವ ಮಾಡುತ್ತಿರುವುದೇಕೆ? ಕೆಪಿಸಿಸಿಯ ವತಿಯಿಂದ ₹25 ಕೋಟಿ ಖರ್ಚು ಮಾಡಲಾಗುತ್ತಿದೆಯೇ, ಲೆಕ್ಕ ಕೊಡುವವರು ಯಾರು?’ ಎಂದು ಪ್ರಶ್ನಿಸಿದೆ.
‘ನಾನೊಬ್ಬ ಪಕ್ಷದ ಶಿಸ್ತಿನ ಸಿಪಾಯಿ, ನನಗೂ ಇತಿ-ಮಿತಿ ಇದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಯ ಅರ್ಥವೇನು? ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷದ ಇತಿ-ಮಿತಿ ಮೀರುತ್ತಿದ್ದಾರೆಂದರ್ಥವೇ? ಅಥವಾ ಅಸಹಾಯಕನಾಗಿ, ಹತಾಶೆಯ ಹಳಹಳಿಕೆಯೇ?’ ಎಂದು ಕೇಳಿದೆ.
‘ಸಿದ್ದರಾಮೋತ್ಸವದ ಬಗ್ಗೆ ಯಾರನ್ನು ಕೇಳಬೇಕೋ ಅವರನ್ನೇ ಕೇಳಿ ಎಂದು ಡಿಕೆಶಿ ಹೇಳಿದ್ದಾರೆ. ಹಾಗಾದರೆ ಸಿದ್ದರಾಮಯ್ಯ ಅವರೊಂದಿಗಿನ ಆಂತರಿಕ ಕದನದಲ್ಲಿ ಡಿಕೆಶಿ ಹಿಂದೆ ಸರಿದಿದ್ದಾರೆಯೇ? ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಮರೆಯಲ್ಲಿ ನಿಂತು ಸಿದ್ದರಾಮಯ್ಯ ವಿರುದ್ಧ ಡಿ.ಕೆ.ಶಿವಕುಮಾರ್ ಗುರಿ ಇಟ್ಟಂತಿದೆ’ ಎಂದು ಬಿಜೆಪಿ ಟ್ವೀಟಿಸಿದೆ.